Posts tagged ‘ಪ್ರೀತಿ’

ಮಳೆ ನಿಂತು ಹೋದ ಮೇಲೆ…

ಪ್ರೀತಿ ಕಡಲೋ, ಮುಗಿಲೋ, ಮಳೆಯೋ ಮತ್ತಿನ್ನೇನೋ? ನನಗೊಂದೂ ಗೊತ್ತಿಲ್ಲ. ಆದರೆ ಈ ಪರಿಯ ಹೋಲಿಕೆ ಪ್ರೀತಿಯ ಅರ್ಥವನ್ನು ಸೀಮಿತಗೊಳಿಸಬಹ್ಮದೆಂಬ ಭಯ ನನಗೆ ಕಾಡಿದ್ದಿದೆ. ಪ್ರೀತಿಯ ಕುರಿತಾಗಿ ಪ್ಮಟಗಟ್ಟಲೇ, ಗಂಟೆಗಟ್ಟಲೇ ಭಯಂಕರವಾಗಿ ಕೊರೆಯುವವರು, ಕನವರಿಸುವವರ ಎದುರು ನಿಂತು ನಿಜಕ್ಕೂ ಪ್ರೀತಿಯೆಂದರೆ ಅಷ್ಟೇನಾ ಕೇಳಬೇಕೆನಿಸುತ್ತದೆ, ಸುಮ್ಮನಾಗುತ್ತನೆ!

ಸತ್ಯವಾಗಿ ಹೇಳುತ್ತೇನೆ, ನೀನಂದು ನನ್ನ ಮರೆತೆಯೆಂದು ತಿಳಿದ ಕ್ಷಣ ನಾನು ಭೋರ್ಗರೆವ ನದಿಯಾಗಲಿಲ್ಲ. ಜಿಟಿ ಜಿಟಿ ಸುರಿಯುವ ಮಳೆಯಾಗಲಿಲ್ಲ. ತಣ್ಣಗಿರುವ ಧರಣಿಯ ಸ್ಥಿತಿಗೆ ಹೋಲಿಸಬಹುದಿತ್ತಷ್ಟೇ. ನೀನು ಕೋಪಿಸಿಕೊಂಡರೂ ಇನ್ನು ಚಿಂತಿಲ್ಲ! ನಾನು ಹೇಳಬೇಕೆನಿಸಿದ್ದನ್ನೆಲ್ಲಾ ಹೇಳುವವನೇ… ನಿನ್ನೊಡನಿದ್ದಾಗ ನಾನು ಕೆಲವು ಕನಸುಗಳ ಕಟ್ಟಿದ್ದೆ, ಈಗಿಲ್ಲವೇ ಎಂದು ವ್ಯಂಗ್ಯವಾಡುವ ಅವಕಾಶ ನಿನಗಿಲ್ಲ. ಯಾಕೆಂದರೆ ಅಂದು ಕೆಲವಿದ್ದ ಕನಸುಗಳೀಗ ಹಲವಾಗಿವೆ!

ನಾನು ನಿನ್ನನ್ಮಡಿಗೆ, ನಡೆಗೆ, ಚೆಲುವಿಗಿಂತ ಹೆಚ್ಚಾಗಿ ಮನಸೋತದ್ದು ಆ ದಪ್ಪನೆಯ ಪುಸ್ತಕದಲ್ಲಿ ನೀನು ಜತನದಿಂದ ಎತ್ತಿಟ್ಟುಕೊಂಡು, ಮರಿ ಹಾಕುತ್ತದೆಂದು ಕಾಯ್ದಿದ್ದ ನವಿಲುಗರಿಗೆ! ಆ ಕಾಯುವಿಕೆಯಲ್ಲಿನ ಗಾಢತೆಗೆ. ಅದು ಮರಿ ಹಾಕಿತೋ ಇಲ್ಲವೋ ಕಾಣೆ, ಆದರೆ ನಿನ್ನ ಆ ಕಾಳಜಿ ನನ್ನಲ್ಲಿ ಸ್ಪಷ್ಟ ಮೊಹರೊತ್ತಿತ್ತು. ನಕ್ಷತ್ರಗಳನ್ನು ಎಣಿಸಿ, ಗುಣಿಸಿ ಸೋತ, ಆಕಾಶದ ಹರವು ಕಂಡು ಆಸೆಪಟ್ಟ, ಅಗಾಧ ಸಾಗರದ ನಡುವೆ ಕುಳಿತು ಹಾಯಿದೋಣಿಗಾಗಿ ಹಂಬಲಿಸುತ್ತಿದ್ದ ನನಗೆ ನೀನು, ಚಿಗುರುವ ಕನಸಿನ ಸನಿಹದ ಆಸರೆಯ ಮರವಾಗಿ ಕಂಡೆ ಅಷ್ಟೆ.

ಮಳೆ ಹೊಯ್ದು ಹದವಾದ ನೆಲದಲ್ಲಿ ಚಿಗುರು ಕೊನರಿ ಗಿಡವಾಯ್ತು, ಬಳ್ಳಿಯಾಯ್ತು ಮತ್ತು ಹಬ್ಬಿತು. ಆಸರೆಗೆ ಮರವಿದೆಯೆಂಬ ವಿಶ್ವಾಸ ಅದಕ್ಕಿತ್ತು. ನಿಜಕ್ಕೂ ನನಗಿವತ್ತು ಪಚ್ಚೆನಿಸುತ್ತಿದೆ. ಹಾದಿ ಸಿಕ್ಕಿದ ನಾನು ಕೊನೆಯ ಕುರಿತು ಯೋಚಿಸುವುದನ್ನು ಮರೆತು ಬಿಟ್ಟೆನಲ್ಲಾ ಎಂದು. ಹೋಗಲಿ ಬಿಡು, ನನಗಾಗ ಹತ್ತರೊಡನೆ ಹನ್ನೊಂದಾಗಬಾರದೆಂಬ ಮೊಂಡ ತನವೂ ಇತ್ತು. ಈಗಲೂ ಇದೆ. ಆದರೆ ಅದರ ತೀವ್ರತೆಗೆ ರೂಪು ರೇಖೆಗಳನ್ನೆಳೆದಿದ್ದೇನೆ. ನಿನಪಿಡು, ರೇಖೆಗಳೆಲ್ಲಾ ಚೌಕಟ್ಟಾಗಬೇಕೆಂದಿಲ್ಲ. ಚೌಕಟ್ಟು ಅಥವಾ ಮೇರೆಯೆಂಬುದು ವ್ಯಕ್ತಿಯ ಚಲನೆಯನ್ನು ನಿಯಂತ್ರಿಸಿ ಆತನ ವಿಪರಿಮೀತ ಬೆಳವಣಿಗೆಗೆ ತಡೆಯೊಡ್ಡುತ್ತದೆಂಬ ಅಚಲ ವಿಶ್ವಾಸ ನನಗೆ. ನಿಯಂತ್ರಿಸುವಿಕೆ, ಸ್ವಾತಂತ್ರ್ಯವಿಲ್ಲದ ಸ್ಥಿತಿಯ ಇನ್ನೊಂದು ರೂಪು. ಅದು ಬಂಧನ. ಬಂಧನವಿದ್ದಲ್ಲಿ ಬೆಳವಣಿಗೆ ಪೂರ್ವಾಗ್ರಹ ಪೀಡಿತ ತಾನೇ? ನೀನು ಒಪ್ಪಲೇ ಬೇಕು.

ನಾನು ಕವನ ಬರೀತಿದ್ದೆ ನೆನಪಿದೆಯಾ? ಅದೇನ್ ಬರೀತೀಯೋ ಮಾರಾಯಾ? ನಂಗಂತೂ ತಲೆಬುಡ ಅರಿಯೊಲ್ಲ ಅಂದಿದ್ದೆ ನೀನು. ನಾನು ನಕ್ಕಿದ್ದೆ! ಇವತ್ತು ಹೇಳುತ್ತೇನೆ. ನನ್ನೊಳಗಿನ ನಾನು ಹೊರಬಂದು ಮಲಗಿದರೆ ಕವನವಾಗುತ್ತಿತ್ತು. ನನ್ನೊಳಗಿನ ನಾನೇ ಸ್ಪಷ್ಟವಾಗಿಲ್ಲದಿದ್ದ ಕಾರಣ ಬರವಣಿಗೆಯೂ ಅಸ್ಪಷ್ಟವೆನಿಸುತ್ತಿತ್ತು. ಆದ್ದರಿಂದಲೇ ನನ್ನ ಬರಹಗಳು ಹಾಗೇ ಒಂಥರಾ ನಿನ್ನ ಹಾಗೆ!

ನೀನು ಬಾಲ್ಯದ ಹುಡುಗಾಟಗಳನ್ನೆಲ್ಲಾ ದಾಟಿ, ತಾರುಣ್ಯದ ಬಿಸುಪು, ಪ್ರಬುದ್ಧತೆ, ಮತ್ತೊಂದಿಷ್ಟು ಅನುಭವಗಳ ಬತ್ತಳಿಕೆ ಹೊತ್ತಿದ್ದೆ. ಹೊಸ ಹಾದಿಗಳ ಹುಡುಕಿ ಸವೆಸುವ ಪ್ರಯೋಗಶೀಲ ಮನಸ್ಸೂ ನಿಂದಾಗಿತ್ತು. ಪ್ರತಿ ಮುಂಜಾವು ಮೂಡುವ ರವಿ ನಿನ್ನಲ್ಲಿ ಹೊಸ ಕನಸುಗಳ ಅರಳಿಸುತ್ತಿದ್ದ. ಅದನ್ನು ಕಾವಲು ಕಾಯಲು ನಾನಿದ್ದೆನೆಂಬ ಧೈರ್ಯ ನಿನಗೆ ಹುಟ್ಟಲಿಲ್ಲ ಅಷ್ಟೆ. ಅಥವಾ ಇವೆಲ್ಲಕ್ಕೂ ಮಿಗಿಲಾದ ಮತ್ತಿನ್ನೇನೋ ನಿನಗೆ ಬೇಕೆನಿಸಿತು ಇಲ್ಲವೇ ಇವೆಲ್ಲಾ ಸಾಕೆನಿಸಿತು. ನಾನು ಪ್ರತಿಯಾಡುವುದಿಲ್ಲ ಗೆಳತಿ ಅದಕ್ಕೆ. ನನಗೆ ಗೊತ್ತು ಬದುಕು ಬದುಕುವವರಿಚ್ಛೆ! ಬದಲಾಯಿಸುವುದು ಕಷ್ಟ ಸಾಧ್ಯ, ಊಹುಂ ಬದಲಾಯಿಸಲು ಬಾರದು. ಮಾದರಿಯಾಗಬಹುದಷ್ಟೇ.

ಮರಕ್ಕೆ ಬಂದಳಿಕೆ ಬಂದಂಟಿದ ಸನ್ನಿವೇಶ ನನಗೆ ನೆನಪಿಲ್ಲ ಇವತ್ತು. ನಿನಗೆ ಧಾರಿಣಿಯೊಡನೆಗಿನ ಸಂಬಂಧ ಮತ್ತಷ್ಟು ಆಪ್ತಬಾಗಬೇಕೆಂದು ಅನ್ನಿಸಿರಲಿಕ್ಕೂ ಸಾಕು ಅವತ್ತು. ಕಾರಣಗಳಿಗಿಂತ ಸಾಧನೆ, ಪರಿಣಾಮ ಮುಖ್ಯವಲ್ಲವೇ? ಬಿಡು…

ಅವತ್ತು ಅಮ್ಮನೊಡನೆ ಅಮ್ಮಾ ನಂಗಿವತ್ತು ನಿನ್ನ ಮಡಿಲು ಬೇಕಿಲ್ಲ, ಒಬ್ಬನೇ ಮಲಗಿ ಕಾದು ನಿಂತ ಕನಸುಗಳಿಗೆ ಸ್ವಾಗತ ಕೋರುತ್ತೇನೆ ಎಂದಾಗಲೇ ಮೋಡ ಕಟ್ಟಿತ್ತು. ಜೋರು ಮಳೆ ಶುರುವಾಗಿದ್ದು ಅಂದುಕೊಂಡಿದ್ದಕ್ಕಿಂತ ಬೇಗ. ಗಾಳಿಯ ಅರ್ಭಟವೂ ಜೋರಿತ್ತು. ಮರ ಮುರಿದು ಬಿತ್ತು. ಅನಾಥವಾಗಲಿಲ್ಲ! ಬದಲಾಗಿ ಇನ್ನೊಂದು ಮರದ ಅರಸುವಿಕೆಗೆ ತೊಡಗಿತು. ನನಗೆ ಎಚ್ಚರವಾಯ್ತು.

ಬಹುಶಃ ಭವಿಷ್ಯದ ಕನಸನ್ನೂ ಹೇಳುವುದು ಪ್ರಸ್ತುತವೆನಿಸುತ್ತಿದೆ. ಇವನ್ನೆಲ್ಲವನ್ನೂ ನೀನು ಓದಲೇ ಬೇಕೆಂಬ ಕಟ್ಟುನಿಟ್ಟು ನಾ ಹಾಕೊಲ್ಲ. ಈ ಬರಹದ ಮೂಲಕ, ನೀನು ನನ್ನೆಲ್ಲಾ ಭಾವನೆಗಳನ್ನು ಗುಡಿಸಿ ಹಾಕಿದೆ ಎಂಬ ಆರೋಪ ಮಾಡುವ ಮನಸ್ಸೂ ನನ್ನದಲ್ಲ. ನನ್ನೊಬ್ಬಳು ಗೆಳತಿ ಹೇಳಿದ್ದಳು ಭಾವುಕತೆಯಿಂದ ಬುದ್ಧಿ ಕುಂಠಿತವಂತೆ. ನಾನಿಷ್ಟು ಹೊತ್ತು ಹೊತ್ತುಕೊಂಡಿದ್ದು ಅದನ್ನೇ. ಭಾವೋತ್ಕರ್ಷವೇ ಇಷ್ಟೆಲ್ಲಾ ಸಾಲುಗಳ ಜನುಮಕ್ಕೆ ಕಾರಣ. ನಾನು ಭಾವನಾ ಜೀವಿ ನಿಜ. ಇವತ್ತಿಗೂ ನನ್ನ ಕಂಪ್ಯೂಟರ್, ಐ ಪಾಡ್ ಗಳಲ್ಲಿ ತುಂಬಿರುವುದು ಅಪ್ಪಟ ಭಾವಗೀತೆ, ಶಾಸ್ತ್ರೀಯಗಳೇ. ಉನ್ನಿಕೃಷ್ಣನ್ ನಂಗೆ ಯಾವತ್ತೂ ಇಷ್ಟ ಅಂತ ನಿಂಗೂ ಗೊತ್ತು. ನಾನು ಆತನ ಅನಿಲ ತರಲ ಹಾಡನ್ನು ಮತ್ತೆ ಮತ್ತೆ ಕೇಳ್ತಿದ್ದಾಗ ನೀನು ಉರಿಬಿದ್ದಿದ್ದು, ಟೇಸ್ಟೇ ಇಲ್ಲ ನಿಂಗೆ ಅಂತ ಜರಿದಿದ್ದು ಎಲ್ಲಾ ನೆನಪಿದೆ ನಂಗೆ. ಆದರೂ ನಾನವತ್ತು ನೊಂದುಕೊಂಡಿರಲಿಲ್ಲ. ನಾನು ಬೇಸರಿಸಿಕೊಂಡರೆ ನೀನು ಪರಿತಾಪ ಪಡುವೆಯೆಂಬ ಗುಮನಿಯಿತ್ತು ನಂಗೆ.

ಇವತ್ತು ನಾನು ಖುಷಿಯಿಂದ ಹೇಳುವುದಿಷ್ಟೇ. ನನ್ನನ್ನು ತೊರೆದು ಹೋಗಿದ್ದಕ್ಕೆ ನಿನಗೆ ಭರಿಸಲಾರದಷ್ಟು ಥ್ಯಾಂಕ್ಸ್ ! ಅದೇ ನಗೆ ಬದುಕಿನ ಸಾಧ್ಯತೆಗಳನ್ನು, ವಿಕ್ಷಿಪ್ತತೆಗಳನ್ನು ಗಾಢವಾಗಿ ಪರಿಚಯಿಸಿದ್ದು. ನನಗೀಗ ಬಳ್ಳಿಯಾಗಿ ಬದುಕುವ ಹಂಬಲವಿಲ್ಲ. ಮರವಾಗಬೇಕು. ಲೆಕ್ಕ ತಪ್ಪಿಹೋಗುವಷ್ಟು ಬಳ್ಳಿಗಳನ್ನು ಪೊರೆಯಬೇಕು. ಬಳ್ಳಿಗಳೆಲ್ಲಾ ಬಲವಾದ ಮೇಲೊಮ್ಮೆ ಜೋರು ಮಳೆ, ಸಿಡಿಲಿಗೆ ಸಿಕ್ಕಿ ಜರ್ಜರಿತಗೊಂಡು ಬಿದ್ದು, ಭೂಮಿಯ ನಡುವೆ ಕರಗಿ ಕಳೆದು ಹೋಗೇಕು, ಅಷ್ಟೇ… ನನಗೀಗ ಮತ್ತೆ ನಕ್ಷತ್ರಗಳನ್ನು ಎಣಿಸುವಾಸೆ, ಮುಗಿಲು ಮುಟ್ಟುವಾಸೆ, ಶತಮಾನಗಟ್ಟಲೆ ದೋಣಿಗಾಗಿ ಕಾಯಬೇಕೆಂಬ ಬಯಕೆ, ಎಲ್ಲಕ್ಕಿಂತ ಹೆಚ್ಚಾಗಿ ಇವೆಲ್ಲಾ ನನ್ನಿಂದ ಮತ್ತು ನನ್ನೊಬ್ಬನಿಂದಲೇ ಸಾಧ್ಯವೆಂಬ ಅಚಲ ನಂಬಿಕೆ.

ಮತ್ತೊಮ್ಮೆ ಥ್ಯಾಂಕ್ಸ್, ಎಲ್ಲದಕ್ಕೂ…