Posts tagged ‘ಕರುಣಾಳು ಬಾ ಬೆಳಕೆ’

ಮುಸುಕಿದ ಮಬ್ಬಿನಲಿ ಕೂತು ಒಂಚೂರು…

ನೂರು ಸಾಲುಗಳು ಹೇಳದ್ದನ್ನು ಒಂದು ಚಿತ್ರ ಹೇಳುತ್ತಂತೆ. ಮಾತು ಸವಕಲಾದರೂ ಸತ್ಯ.

ಬ್ಲಾಗ್ ಹೆಡ್ಡರ್ ಗೆ ಬಳಸಿದ ಚಿತ್ರ ಹೇಳುವುದು ಏನೇ ಇರಲಿ ನಾನು ಹೇಳಬೇಕಾದ್ದು ಒಂದಷ್ಟಿದೆ. ನನ್ನ ಮಧುರಾತಿ ಮಧುರ ನೆನಪುಗಳು ಅವಿತು ಕುಳಿತಿವೆ, ಈ ಚಿತ್ರದ ನಡುವಲ್ಲಿ. ಉತ್ತರ ಭಾರತ ಪ್ರವಾಸ ಹೊರಟಿದ್ದ ನಾವು ಕೆಲವು ಪ್ರದೇಶಗಳನ್ನು ನೋಡಿದ್ದೆವು. ಹಲವನ್ನು ನೋಡುವುದರಲ್ಲಿದ್ದೆವು! ಈ ಮಧ್ಯೆ ಭಾರತದ ಅತಿದೊಡ್ಡ ಉಪ್ಪು ನೀರಿನ ಸರೋವರ ಚಿಲ್ಕಾ ದಲ್ಲಿ ಒಂದು ಸುಂದರ ಮುಸ್ಸಂಜೆ ಕಳೆದದ್ದು. ಆಗಲೇ ಮೇಲಿನ ಚಿತ್ರ ಸಿಕ್ಕಿದ್ದು.

ತಲಾ ತೊಂಭತ್ತು ರುಪಾಯಿಗಳಷ್ಟು ತೆತ್ತು, ಒಂಭತ್ತು ಜನರ ನಮ್ಮ ಗುಂಪು ದೋಣಿ ವಿಹಾರ ಸವಿ ಉಣ್ಣುತ್ತಿದ್ದೆವು. ಮೀನುಗಾರನೊಬ್ಬ ತನ್ನ ದೋಣಿಯನ್ನು ತೀರ ತಲುಪಿಸಿ, ದಿನದ ಫಸಲನ್ನು ಗುಡ್ಡೆಹಾಕಿ ಅದರ ಹಂಚಿಕೆಯೊಡನೆ ತನ್ನ ಭವಿಷ್ಯದ ಕವಲುಗಳನ್ನು ಎಣಿಸುತ್ತಿರುವಂತೆ ಕಂಡ. ಅಲ್ಲಿನ ಮತ್ಸ್ಯಗಾರರ ದುರ್ದರ ಬದುಕಿನ ಕುರಿತು ನಮ್ಮ ದೋಣಿ ನಡೆಸುವವ ವಿವರಿಸಲು ಪ್ರಾರಂಭಿಸಿದ. ದೂರದಲ್ಲಿ ಭಾಸ್ಕರನೂ ದಿನದ ಡ್ಯೂಟಿ ಮುಗಿಸಿ ಸಾಗರದ ಸನ್ನಿಧಿ ಸೇರುತ್ತಿದ್ದ. ಆತ ಕೊನೆಯದಾಗಿ ಬೀರಿದ ಬೆಳಕು ಮೀನುಗಾರನಿಗೆ ಮುಟ್ಟುತ್ತಿರಲಿಲ್ಲ!

ಮುಂದೆ ಊಹಿಸಿಕೊಳ್ಳುವ ಸ್ವಾತಂತ್ರ್ಯ ನಿಮಗೆ…!!!

ಅದ್ಯಾಕೋ ಅಂದು ತಟ್ಟನೇ ಬಿ.ಎಂ.ಶ್ರೀ ಯವರ ಕರುಣಾಳು ಬಾ ಬೆಳಕೇ ನೆನಪಾಗಿ ಬಿಟ್ಟಿತು. ಅದು ಇಂದು ಮತ್ತೆ ನೆನಪಾಯಿತು!