Archive for the ‘ಹಾಳೂ-ಮೂಳು’ Category

ಜಗ”ಜ್ಜಾಹೀರಾತು”…!

‘ರುಪರ್ಟ್ ಮರ್ಡೋಕ್’ ಮೊನ್ನೆ ಮೊನ್ನೆ ತಾನೇ ಬಿಳುಚಿಕೊಂಡಿದ್ದನ್ನು ಕಂಡಾಯಿತು. ಮಾಧ್ಯಮ ಸಂಬಂಧಿ ನೈತಿಕತೆಗಳಿಗೆಲ್ಲ ಇತಿಶ್ರಿಯಿಡದೇ  ಅಂತಹ ಸಾಮ್ರಾಜ್ಯ ಕಟ್ಟುವುದು ಅಸಾಧ್ಯವೆಂಬ ಅರಿವು ಯಾರಿಗಿರಲಿಲ್ಲ ಹೇಳಿ? ಮರ್ಡೋಕ್ ನ ಕಥೆ ಒತ್ತಟ್ಟಿಗಿರಲಿ. ಬಹಳಷ್ಟು ಪ್ರಾದೇಶಿಕ ಮಾಧ್ಯಮಗಳೂ ಇದಕ್ಕೆ ಒಗ್ಗಿ ಹೋಗಿದ್ದಾವೆ, ನನ್ನನ್ನೂ ಸೇರಿದಂತೆ ಅನೇಕರಿಗೆ ಈ ಸಂಗತಿ ಹೊಸದಾಗಿ ಕಾಣುತ್ತಿಲ್ಲ, ಕಾಡುತ್ತಿಲ್ಲ ಎಂಬಲ್ಲಿಗೆ ವರ್ತಮಾನದ ನಮ್ಮೆಲ್ಲರ ದಾರಿ ಸ್ಪಷ್ಟವಾದಂತಾಯ್ತು…! ಇಂಗ್ಲಿಷ್ ಚಿತ್ರವೊಂದನ್ನು ನೋಡಿದ್ದ ನೆನಪು ಅರೆಬರೆಯಾಗಿದೆ. ಹೆಸರು ನೆನಪಿಲ್ಲದ ಆ ಸಿನಿಮಾದಲ್ಲಿ ಪತ್ರಿಕೆಯೊಂದರ ಸಂಪಾದಕನಾಗಿರುವ ಆತನಿಗೆ ಸಹಜ ಸುದ್ದಿ ಬೇಕಾಗಿಲ್ಲ ಅಥವಾ ಓದುಗರು ಅದನ್ನು ಸ್ವೀಕರಿಸಲಾರರು ಎಂಬ ಬಲವಾದ ನಂಬಿಕೆ ಇದ್ದಂತಿದೆ. “ಜನಕ್ಕೆ ಅಚ್ಚರಿಗಳನ್ನು ನೀಡದೆ ತನಗೆ ಲಾಭವಿಲ್ಲ” ಎಂಬುದು ಆತನ ಒನ್ ಲೈನ್ ಅಜೆಂಡಾ..! ಹಾಗಾಗಿ ಆತ ಸುದ್ದಿಗಳನ್ನು ಸೃಷ್ಟಿಸುತ್ತಾನೆ! ತನ್ನಿಮಿತ್ತ ಅನೇಕ ತಲೆಗಳುರುಳುತ್ತವೆ, ಅಸ್ಥಿರತೆಗಳು ಸೃಷ್ಟಿಯಾಗುತ್ತವೆ. ಆತನ ಪತ್ರಿಕೆಗಳು “ಬಿಸಿ ತೊಡದೇವಿನಂತೆ” (!!!) ಖರ್ಚಾಗುತ್ತವೆ. ಮುಂದಿನ ದೃಶ್ಯಗಳು ನನಗೂ ಕಲಸುಮೇಲೋಗರ. ಹಾಗಾಗಿ ಇದನ್ನು ಇಲ್ಲಿಗೆ ನಿಲ್ಲಿಸುತ್ತೇನೆ.
ಇವತ್ತು ಅಂತರ್ಜಾಲ ಸಿಕ್ಕ CNN – Turkey ಗೆಂದು DDB ಮಾಡಿಕೊಟ್ಟ ಸೃಜನಶೀಲ ಜಾಹೀರಾತುಗಳನ್ನು ನೋಡಿ ಇಷ್ಟೆಲ್ಲಾ ಹೇಳುವಂತಾಯಿತು. ವಿಭಿನ್ನ ನೆಲೆಯಲ್ಲಿ ಪ್ರಸ್ತುತಪಡಿಸಿದ ಈ ಜಾಹೀರಾತುಗಳು ಥಟ್ಟನೆ ಗಮನ ಸೆಳೆಯುವಂತಿವೆ. ಅಂದಹಾಗೆ ಮೇಲೆ ಹೇಳಿದ್ದಕ್ಕೂ CNN – Turkey ಯ ಜಾಹೀರಾತಿಗೂ ಯಾವ ಕಾರ್ಯಕಾರಣಭಾವ ಸಂಬಂಧವೂ ಇಲ್ಲ! ಮಾತು ಇಷ್ಟು ಸಾಕು. ಈ ಜಾಹಿರಾತುಗಳನ್ನು ನೀವೂ ನೋಡುವಂತವರಾಗಿ…

“ಕಟ್ಟಳೆಗಳಿಲ್ಲದ ಎರಡು ಜಾಹೀರಾತುಗಳು…”

ಕಾಲೇಜ್ ದಿನಗಳಲ್ಲಿ ವರ್ಕ್ ಸಬ್ ಮಿಶನ್ ನಾಳೆ ಎನ್ನುವಾಗ ಎದ್ದು ಬಿದ್ದು ಉಳಿದೆಲ್ಲ (ಎಲ್ಲವೂ ಉಳಿದಿರುತ್ತಿದ್ದವು ಎಂಬುದು ಬೇರೆ ಮಾತು…!) ವರ್ಕ್ ಗಳನ್ನೂ ಒಂದೇ ರಾತ್ರಿಯಲ್ಲಿ ಪೂರೈಸುವ “ಪ್ರತಿಭಾವಂತ” ನಾನಾಗಿದ್ದೆ…! ಅಂತ ಹೊತ್ತಿನಲ್ಲೇ ಹುಟ್ಟಿದ ಎರಡು ಜಾಹೀರಾತುಗಳು ಇಲ್ಲಿವೆ…

(ಚಿತ್ರದ ಮೇಲೆ ಕ್ಲಿಕ್ಕಿಸಿದರೆ ದೊಡ್ಡದಾಗುತ್ತದೆ)

ಜಾನಿ ಜಪಾನಿ ಮಂಗಗಳು…!!!

ರಾಜಸ್ತಾನದ ಜೈಪುರದ ಪಾರ್ಕೊಂದರಲ್ಲಿ (ಹೆಸರು ನೆನಪಿಲ್ಲ) ಕ್ಲಿಕ್ಕಿಸಿದ ಫೋಟೋ.

ದೀಪ ಉರಿಯುತ್ತಿದೆ…!!!

ಹೆಡ್ಡಿಂಗ್ ಬರೆದು ಎನು ಬರೆಯೋದು ಅಂತ ಯೋಚಿಸುತ್ತಿದ್ದೇನೆ. ಅದು ದೀಪವೋ, ಬೆಂಕಿಯೋ ಎಂಬುದನ್ನೂ ನಿರ್ಧರಿಸಲಾರದಂತಾಗಿದ್ದೇನೆ. ಬ್ಲಾಗ್ ಕಡೆಗೊಂದು ದಿವ್ಯ ನಿರ್ಲಕ್ಷ್ಯ ಬಿಸಾಕಿ ತಿಂಗಳುಗಳೇ ಸರಿಯಿತು. ಅಂತದ್ದೊಂದು ನಿರ್ಲಕ್ಷ್ಯಕ್ಕೆ ಸೋಮಾರಿತನವೆನ್ನುವುದೇ ಸೂಕ್ತವೇನೋ. ಅದೇನೇ ಇರಲಿ ಕಳೆದ ತಿಂಗಳು ಚಿಲ್ಲರೆ ದಿನಗಳು ಪುನಃ ವಾಪಸಾಗುವುದಿಲ್ಲವೆಂಬುದು ಕಹಿ ಸತ್ಯವೆಂಬ ಅರಿವಿದೆ.
     ಈ ಪುರಾಣಗಳೆಲ್ಲಾ ಒತ್ತಟ್ಟಿಗಿರಲಿ. ಇವತ್ತು ಏನಾದರೂ ಟೈಪಿಸಲೇ ಬೇಕೆಂಬ ಹಠ ಹೊತ್ತು ಕುಳಿತಿದ್ದೇನೆ. ಗೆಳೆಯರೆಲ್ಲಾ ಮತ್ತೆ ಮತ್ತೆ ಎಚ್ಚರಿಸುತ್ತಿದ್ದಾರೆ. ನಿನ್ನ ಬ್ಲಾಗ್ ಹಿಟ್ಸ್ ಸದಾ ಬಿದ್ದುಕೊಂಡಿರುವ ಹೆಬ್ಬಾವಿನಂತೆ ಆಗಿಬಿಟ್ಟಿದೆಯಲ್ಲಾ ಮಾರಾಯ, ಎನನ್ನಾದರೂ ತುರುಕೋ ಅಂತ. ಆ ಪ್ರೀತಿಗೆ ಒಂದು ಧನ್ಯವಾದದ ಹೊರತು ಬೇರೇನೂ ಹೇಳಲಾರೆ.
     ಕೆಲವು ದಿನ ಒಂದಿಷ್ಟು ಸುಮ್ಮನೆ ಯೋಚನೆಗಳು ತಲೆಯೆತ್ತಿತ್ತು. ಇಷ್ಟಕ್ಕೂ ಬ್ಲಾಗ್ ಶುರು ಮಾಡಿದ್ದು ಏಕೆ? ನಾವಡರ ಬಲವಂತಕ್ಕೋ? ಬರವಣಿಗೆಗೆ ಇಂಬು ದೊರೆಯಲೆಂದೋ? ನನ್ನೆಲ್ಲಾ ಯಕಶ್ಚಿತ್ ಬರಹಗಳನ್ನು ಕೂಡಿಡಲೋ? ಇವೆಲ್ಲಕ್ಕಿಂತ ಹೆಚ್ಚಾಗಿ ನಾನೂ ಬರೆಯಬಲ್ಲೆ ಎಂದು ಸಾರಲೆಂದೋ? ಅಥವಾ ನನ್ನ ಖಾಸಗಿಗಳನ್ನೆಲ್ಲಾ ಬಹಿರಂಗ ಮಾಡಲೋ? ಬ್ಲಾಗ್ ಹಿಟ್ಸ್ ಹಿಮಾಲಯ ಮುಟ್ಟೋಕೆ ಅಂತ ಬರೀಬೇಕಾ?  ಅಂತಲೂ ಅನ್ನಿಸಿ,  ಒಂದೂ ತಿಳಿಯದೇ ಪ್ರಶ್ನೆಗಳ ನಡುವೆಯೇ ಉಸಿರುತ್ತಿದ್ದೆ.
    ಒಂದಷ್ಟು ದಿನ ಛೆ, ಬೇಕಾ ಇವೆಲ್ಲಾ ರಾಮಾಯಣ? ಎನಿಸಿದ್ದೂ ಇದೆ. ಅಂದರೆ ಈಗ ಆ ಮೊದಲಿನ ಪ್ರಶ್ನೆಗಳೆಲ್ಲಾ ಮಾಯವಾದವಾ ಎಂಬುದಕ್ಕೂ ಉತ್ತರವಿಲ್ಲ. ಈ ಹೊತ್ತಿನಲ್ಲಿ ಅವು ಕಾಣುತ್ತಿಲ್ಲ ಎಂಬುದಷ್ಟೇ ನಿಜ. ನಾಳೆ ಹೇಗೋ ಗೊತ್ತಿಲ್ಲ. ನನಗೆ ಇವೆಲ್ಲಾ ಸಂಗತಿಗಳು ಕಾಡುತ್ತಿವೆ, ಅದಕ್ಕೆ ಅವು ತೀರುವಷ್ಟು ದಿನ ಬ್ಲಾಗ್ ಕದ ತಟ್ಟುವುದಿಲ್ಲ. ಎಂದು ಒಂಬ ಒಂದು ಒಕ್ಕಣೆಯನ್ನಾದರೂ ಪೋಸ್ಟ್ ಮಾಡೋಣವೆಂದುಕೊಂಡಿದ್ದೆ. ಆದರೆ ನನ್ನ ತಳಮಳಗಳನ್ನು ಹೀಗೆಲ್ಲಾ ಹರಡಬೇಕಾ? ಅದನ್ನೂ ಬ್ಲಾಗಿಗೆ ತುರುಕಿ ಅದಕ್ಕೂ ಒಂದು ಬೆಲೆ ಕಟ್ಟಬೇಕಾ ಎಂದೆನಿಸಿ ಸುಮ್ಮನಾದೆ. ಸದ್ಯ ಇವತ್ತು ಆ ಎಲ್ಲಾ ಅನಿಸಿಕೆಗಳಿಗೂ ಸ್ಟಾಪ್ ಸಿಗ್ನಲ್ ತೋರಿಸಿದ್ದೇನೆ!
      ಬದುಕೂ ಕೆಲವೊಮ್ಮೆ ಹೀಗೇ ಸವಾಲೆಸೆಯುತ್ತದಲ್ವಾ? ಬಗೆಹರಿಸು ನೋಡೋಣ ಅಂತ ಅದು ತೊಡೆ ತಟ್ಟಿ ನಿಂತುಬಿಟ್ಟರೆ ಸಾಕು. ಜಟ್ಟಿಯೊಬ್ಬನ ಭರ್ಜರಿ ಪಟ್ಟಿನಲ್ಲಿ ಸಿಕ್ಕಿಕೊಂಡು ಸಿರ ಸಿರ ಉಸಿರಾಡುವವರ ಪಾಡಾಗಿಬಿಡುತ್ತದೆ ನಮ್ಮದು. ನಿಲುಗಡೆಯೇ ಇಲ್ಲದ ಎಕ್ಸ್‌ಪ್ರೆಸ್ ರೈಲಿನಂತಾಗಿಬಿಡಬೇಕು ಅನಿಸುತ್ತದೆ ಒಮ್ಮೊಮ್ಮೆ. ಆದರೆ ಮರುಕ್ಷಣವೇ ಅಂತಹ ರೈಲಿಗೂ ಹೊರಡುವ ಮತ್ತು ಕೊನೆಯ ಒಂದು ನಿಲ್ದಾಣವಿರುತ್ತದೆ ಎಂಬುದು ಹೊಳೆಯುತ್ತದೆ. ಹೊಸ ಹೊಸ ತಿರುವುಗಳು, ನಿಲ್ದಾಣಗಳು, ಅನಾಮಿಕ ಪ್ರಯಾಣಿಕರು ಎಲ್ಲರೂ ವೃತ್ತವೊಂದರ ಭಾಗವಾಗಿಯೇ ಅದು ಸಂಪೂರ್ಣ ವೃತ್ತವಾಗುವುದು ಎಂಬುದು ನಿಟ್ಟುಸಿರು ಬಿಡಿಸುತ್ತದೆ. ಬೋದಿಲೇರನ, ಬದುಕೆಂದರೆ ಜೂಜುಗಾರನ ಕೈಲಿ ಮುಗಿದುಳಿದ ನಾಣ್ಯದ ಚೀಲ, ಅರ್ಧ ಉಳಿದ ಸಿಗರೇಟ್ ಮತ್ತು ಧುತ್ತೆಂದು ಕೊನೆಯಾಗುವ ದಾರಿ ಎಂಬ ಸಾಲುಗಳು ಮತ್ತಷ್ಟು ಚಿಂತನೆಗೆ ಹಚ್ಚುತ್ತವೆ. ಒಂದಂತೂ ನಿಜ ಯಾವ ಬರವಣಿಗೆಯೂ, ಯಾವ ಮಾದರಿಗಳೂ ನಮ್ಮ ಬದುಕನ್ನು ನಿರ್ಧರಿಸಲಾರವು. ನಿರ್ದೇಶಿಸಬಹುದಷ್ಟೇ! ಈ ಸಾಲುಗಳು ಸಹ ನಾನ್ಯಾರದ್ದೋ ಭಾಷಣದಲ್ಲಿ ಕೇಳಿದ್ದೋ, ಬರಹದಲ್ಲಿ ಓದಿದ್ದೋ ಇರಬೇಕು!! ನಿಜವೆಂತೂ ಹೌದು ತಾನೆ? ಎಲ್ಲಾ ಗೊತ್ತಿಲ್ಲಗಳ ನಡುವೆಯೇ ದಾರಿಗಳು ಹುಟ್ಟಿಕೊಳ್ಳುತ್ತವೋ ಅದೂ ಗೊತ್ತಿಲ್ಲ!
         ಯಾಕೋ ಇಲ್ಲಿಗೆ ನಿಲ್ಲಿಸೋಣವೆನಿಸುತ್ತಿದೆ…. ಮತ್ತೆ ಸಿಗುತ್ತೇನೆ…

ಒಂದಿಷ್ಟು ಸುಮ್ಮನೆ ಸಾಲುಗಳು

ಮುಚ್ಚಿದ ಬಾಗಿಲುಗಳನ್ನು
ತೆರೆದ ಕಿಟಕಿಗಳು
ಸಮಾಧಾನಿಸುತ್ತಿದ್ದವು!

ಕನ್ನಡಿಯ ತುಂಬೆಲ್ಲಾ
ಸೀಳುಗಳು, ಛಿದ್ರ ಚಿತ್ತಾರ
ಪ್ರತಿ ಚೂರೂ ನಿನ್ನ ನೆನಪನ್ನೇ ಸಾರುತ್ತಿತ್ತು
ಬರುವನ್ನೇ ಕಾಯುತ್ತಿತ್ತು.

ಸುಭೀಕ್ಷವಾದ ಒಂದೂರಿನಲ್ಲಿ ಜನರಿಗೆ ತಮ್ಮ ಕೆಲಸದ ಸಮಯ ಗ್ರಹಿಸಲು ಯಾವುದೇ ಮಾಧ್ಯಮ ಇರಲಿಲ್ಲ. ಬುದ್ಧಿವಂತನೊಬ್ಬ ಬೆಳಿಗ್ಗೆ, ಸಂಜೆ ಬಾನಲ್ಲಿ ಹಾರುವ ಹಕ್ಕಿಗಳ ಪುಕ್ಕ ಹಿಡಿದು ಸಮಯ ಗುರುತಿಸಿದ. ಕೆಲವು ದಿನಗಳಲ್ಲಿ ಆ ಊರಿನ ತುಂಬಾ ಪುಕ್ಕಗಳೇ ತುಂಬಿಕೊಂಡವು. ನಂತರ ಪುಕ್ಕಗಳೇ ಸಿಗುತ್ತಿರಲಿಲ್ಲ. ಈ ನಡುವೆ ಊರಿನ ಎಲ್ಲರೂ ಬಿಲ್ಲುವಿದ್ಯಾ ಪ್ರವೀಣರಾಗಿದ್ದರು!
ಬಿಚ್ಚಲು ನವಿಲಿಗೆ ಗರಿಗಳೇ ಇರಲಿಲ್ಲ. ಉದುರಿದ ಎಲ್ಲಾ ಗರಿಗಳ ಮುಖದಲ್ಲೂ ಒಂದೊಂದು ನವಿಲು ಗರಿ ಬಿಚ್ಚಿ ನರ್ತಿಸುತ್ತಿತ್ತು. ಆ ಎಲ್ಲಾ ನವಿಲುಗಳ ಗರಿಗಳ ಮೇಲೂ ಹೆಣ್ಣು ನವಿಲುಗಳು ಕಣ್ಣು ಮುಚ್ಚಿ ಕುಳಿತಿದ್ದವು!
ಕತ್ತಲೆಯ ಕೋಣೆಯೊಳಗಿನ ಕಣವೊಂದು ಉಸಿರಾಡಲು ಕಷ್ಟವಾಗಿ ಪಕ್ಕದ ಕಣದಲ್ಲಿ ತನ್ನ ಕಷ್ಟ ತೋಡಿಕೊಂಡಿತು. ಈ ವಿಷಯ ಎಲ್ಲವಕ್ಕೂ ಗೊತ್ತಾಗಿ, ಎಲ್ಲವೂ ಸೇರಿ ಕಿಟಕಿ ತೆರೆದವು. ಗಾಳಿ ಮತ್ತು ಬೆಳಕು ಒಟ್ಟಾಗೇ ಬಂದವು.

ಮುಸುಕಿದ ಮಬ್ಬಿನಲಿ ಕೂತು ಒಂಚೂರು…

ನೂರು ಸಾಲುಗಳು ಹೇಳದ್ದನ್ನು ಒಂದು ಚಿತ್ರ ಹೇಳುತ್ತಂತೆ. ಮಾತು ಸವಕಲಾದರೂ ಸತ್ಯ.

ಬ್ಲಾಗ್ ಹೆಡ್ಡರ್ ಗೆ ಬಳಸಿದ ಚಿತ್ರ ಹೇಳುವುದು ಏನೇ ಇರಲಿ ನಾನು ಹೇಳಬೇಕಾದ್ದು ಒಂದಷ್ಟಿದೆ. ನನ್ನ ಮಧುರಾತಿ ಮಧುರ ನೆನಪುಗಳು ಅವಿತು ಕುಳಿತಿವೆ, ಈ ಚಿತ್ರದ ನಡುವಲ್ಲಿ. ಉತ್ತರ ಭಾರತ ಪ್ರವಾಸ ಹೊರಟಿದ್ದ ನಾವು ಕೆಲವು ಪ್ರದೇಶಗಳನ್ನು ನೋಡಿದ್ದೆವು. ಹಲವನ್ನು ನೋಡುವುದರಲ್ಲಿದ್ದೆವು! ಈ ಮಧ್ಯೆ ಭಾರತದ ಅತಿದೊಡ್ಡ ಉಪ್ಪು ನೀರಿನ ಸರೋವರ ಚಿಲ್ಕಾ ದಲ್ಲಿ ಒಂದು ಸುಂದರ ಮುಸ್ಸಂಜೆ ಕಳೆದದ್ದು. ಆಗಲೇ ಮೇಲಿನ ಚಿತ್ರ ಸಿಕ್ಕಿದ್ದು.

ತಲಾ ತೊಂಭತ್ತು ರುಪಾಯಿಗಳಷ್ಟು ತೆತ್ತು, ಒಂಭತ್ತು ಜನರ ನಮ್ಮ ಗುಂಪು ದೋಣಿ ವಿಹಾರ ಸವಿ ಉಣ್ಣುತ್ತಿದ್ದೆವು. ಮೀನುಗಾರನೊಬ್ಬ ತನ್ನ ದೋಣಿಯನ್ನು ತೀರ ತಲುಪಿಸಿ, ದಿನದ ಫಸಲನ್ನು ಗುಡ್ಡೆಹಾಕಿ ಅದರ ಹಂಚಿಕೆಯೊಡನೆ ತನ್ನ ಭವಿಷ್ಯದ ಕವಲುಗಳನ್ನು ಎಣಿಸುತ್ತಿರುವಂತೆ ಕಂಡ. ಅಲ್ಲಿನ ಮತ್ಸ್ಯಗಾರರ ದುರ್ದರ ಬದುಕಿನ ಕುರಿತು ನಮ್ಮ ದೋಣಿ ನಡೆಸುವವ ವಿವರಿಸಲು ಪ್ರಾರಂಭಿಸಿದ. ದೂರದಲ್ಲಿ ಭಾಸ್ಕರನೂ ದಿನದ ಡ್ಯೂಟಿ ಮುಗಿಸಿ ಸಾಗರದ ಸನ್ನಿಧಿ ಸೇರುತ್ತಿದ್ದ. ಆತ ಕೊನೆಯದಾಗಿ ಬೀರಿದ ಬೆಳಕು ಮೀನುಗಾರನಿಗೆ ಮುಟ್ಟುತ್ತಿರಲಿಲ್ಲ!

ಮುಂದೆ ಊಹಿಸಿಕೊಳ್ಳುವ ಸ್ವಾತಂತ್ರ್ಯ ನಿಮಗೆ…!!!

ಅದ್ಯಾಕೋ ಅಂದು ತಟ್ಟನೇ ಬಿ.ಎಂ.ಶ್ರೀ ಯವರ ಕರುಣಾಳು ಬಾ ಬೆಳಕೇ ನೆನಪಾಗಿ ಬಿಟ್ಟಿತು. ಅದು ಇಂದು ಮತ್ತೆ ನೆನಪಾಯಿತು!

 

ಸ್ಪಷ್ಟ ಕನಸೂ…, ಮತ್ತದರ ಅಸ್ಪಷ್ಟ ಹರಿವೂ…

ಧೋ ಎಂದು ಪೃಥ್ವಿಯನ್ನೇ ಕಬಳಿಸುವೋಪಾದಿಯಲ್ಲಿ ವರುಣನ ಆರ್ಭಟ. ದಟ್ಟ ಕಾಡು. ಹೆಚ್ಚಾಗಿ ಅದು ನಮ್ಮೂರು. ನಂಗೆ ಆ ಪ್ರದೇಶದ ಇಂಚಿಂಚೂ ಗೊತ್ತೆಂಬ ಹೆಗ್ಗಳಿಕೆಯಿದೆ. ಅಲ್ಲಿ ಏರ್ಪಾಟಾಗಿದ್ದು ರಸಪ್ರಶ್ನೆ ಸ್ಪರ್ಧೆ! ಪ್ರಪಂಚದ ಮೂಲೆ ಮೂಲೆಯಿಂದ ವಿವಿಧ ಹಂತಗಳಲ್ಲಿ ವಿಜಯಿಗಳಾಗಿ ಇಲ್ಲಿ ಆಗಮಿಸಿದ್ದಾರೆ ಸ್ಪರ್ಧಿಗಳು. ಆದರೆ ಅಚ್ಚರಿಯೆಂದರೆ ಹಾಗೆ ಬಂದವರೆಲ್ಲರ ಕೈನಲ್ಲೂ ಮಾರುದ್ದದ್ದ ಹಗ್ಗ! ಬುಡ ಸ್ಪರ್ಧಿಗಳ ಕೈನಲ್ಲಾದರೆ, ತುದಿ ಎಮ್ಮೆ, ಕೋಣಗಳ ಕತ್ತಿನಲ್ಲಿ. ಅವುಗಳೆಲ್ಲವುಗಳ ಕೋಡು ಮಾತ್ರ ಒಂದೇ ಥರ! ದೊಡ್ಡದು..ಅವು ಯಾಕೋ ಗೊತ್ತಿಲ್ಲ.ಸ್ಪರ್ಧೆ ಶುರುವಾಗೇ ಬಿಟ್ಟಿತು. ಪ್ರಶ್ನೆ ಕೇಳುತ್ತಿದ್ದವ ಉದ್ದನೆಯ ಕಿರೀಟ, ನೀಲಿ ನಿಲುವಂಗಿ ಧರಿಸಿದ್ದ. ಅವ ನಮ್ಮೂರಿನವನಂತೂ ಅಲ್ಲ. ಅಂತಹ ಮಳೆ ಹೊಯ್ಯುತ್ತಿದ್ದರೂ ಯಾರ ಮೈಯೂ ನೆನೆಯದಂತೆ ವ್ಯವಸ್ಥೆ ಮಾಡಿದ್ದು ಅವನೇ. ಹಾಗಂತ ಮೇಗಡೆ ಯಾವ ಸೂರಿನ ಸೃಷ್ಟಿಯೂ ಆಗಿಲ್ಲ. ಆದರೂ ಯಾರಿಗೂ ಈ ವ್ಯವಸ್ಥೆ ವಿಶೇಷವಿನಿಸುತ್ತಿಲ್ಲ. ಉಪಸ್ಥಿತರಿದ್ದ ನೂರೆಂಟು ಸ್ಪರ್ಧಿಗಳು, ಜೊತೆಗೆ ಅವರು ತಂದಿದ್ದ ಕೋಣ, ಎಮ್ಮೆಗಳು ಅಲ್ಲದೇ ನಮ್ಮೂರಿನ ಬಹುತೇಕ ಎಲ್ಲಾ ಹಿರಿ ಕಿರಿ ತಲೆಗಳೂ ಕಾತರರಾಗಿ ಸುತ್ತ ನೆರೆದಿದ್ದಾರೆ. ಮೂರು-ನಾಲ್ಕು ಹಂತವನ್ನು ದಾಟಿ ಸ್ಪರ್ಧೆ ಮುಂದುವರೆಯುತ್ತಿತ್ತು. ಸುಮ್ಮನೇ ನಿಂತಿದ್ದ ಕೋಣವೊಂದು ಚಡಪಡಿಸಿತು. ಇದ್ದಕ್ಕಿದ್ದಂತೆ ಎಲ್ಲಾ ಎಮ್ಮೆ, ಕೋಣಗಳಿಗೂ ಇದು ಸಾಂಕ್ರಾಮಿಕವಾಯಿತು. ಇದ್ದಕ್ಕಿಂದಂತೆ ಎಲ್ಲವೂ ಮಾಲೀಕರ ಕೈನಿಂದ ತಪ್ಪಿಸಿಕೊಂಡು ಯದ್ವಾ ತದ್ವಾ ಓಡತೊಡಗಿದವು. ಹದಿನೆಂಟೋ ಇಪ್ಪತ್ತೋ ಜನರ ಮೈಮೇಲೆ ಎರಗಿದ ಅವುಗಳು ಕೆಂಬಣ್ಣ ಚೆಲ್ಲಿದವು. ಸುತ್ತ ನಿಂತವರಿಗೆಲ್ಲಾ ಒಂದು ಕ್ಷಣದ ಗಾಬರಿಗೆ ಮಾತ್ರ ಅವಕಾಶವಿದ್ದುದು. ಪರಿಸ್ಥಿತಿಯ ಅರಿವು ಮುಟ್ಟಿದ ಅವರುಗಳೆಲ್ಲಾ ಅಂಡಿಗೆ ಕಾಲು ಹಚ್ಚಿ ಕೋಣ, ಎಮ್ಮೆಗಳಿಗೆ ಸೆಡ್ಡು ಹೊಡೆಯುವರಂತೆ ಓಡ ಹತ್ತಿದರು. ಸಿಕ್ಕ ಸಿಕ್ಕಲ್ಲಿ ಅವಿತು ಕೂತರು. ಅಂತಹ ಸಂದರ್ಭದಲ್ಲೂ ನಾನು ಗಮನಿಸಿದ್ದೇನೆಂದರೆ ಎತ್ತು, ಕೋಣಗಳಿಗೆ ನಿರ್ದೇಶಿಸುತ್ತಿದವ ಕಿರೀಟ, ನೀಲಿ ನಿಲುವಂಗಿ ತೊಟ್ಟವ. ಆದರೆ ಆ ಕುರಿತು ನಿಂತು ಯೋಚಿಸಲು ಸಮಯವನ್ನು ವೆಚ್ಚ ಮಾಡುವುದು ಮೂರ್ಖತನವೆಂದೆನಿಸಿ ಓಟ ಕಿತ್ತಿದ್ದೆ.

ಒಬ್ಬೊಬ್ಬರದೇ ಸ್ವರ ಭೂಮಿಯ ಸಮತಟ್ಟಿನಿಂದ ಉಪಕ್ರಮಿಸಿ, ಮರಗಿಡಗಳನ್ನು ದಾಟಿ, ಮೋಡಗಳನ್ನು ಹಾದು ಅನತಿ ದೂರದಲ್ಲಿ ಪರಿಸಮಾಪ್ತಿಯಾಗುತ್ತಿತ್ತು! ನಾನು ನಿಶ್ಚಯಿಸಿಕೊಂಡಂತೆ, ನನಗೆ ಮೊದಲೇ ತಿಳಿದ್ದಿದ್ದ, ಕೋಣ, ಎಮ್ಮೆಗಳ್ಯಾವುದೂ ಬರಲಾಗದ ಎತ್ತರದ ಧರೆಯ ಇಕ್ಕಟ್ಟಿನ ಸ್ಥಳದಲ್ಲಿ ನಾಜೂಕಾಗಿ ನಿಂತಿದ್ದೆ. ಅಲ್ಲಿಗೆ ಮತ್ತೊಬ್ಬ ಮನುಷ್ಯನ ಆಗಮನವೂ ಅಪಾಯಕಾರಿಯಾಗಿತ್ತು. ನಿಂತಿದ್ದ ನೆಲವೇ ಕುಸಿಯುವ ಭಯವಿತ್ತು. ಸಮಯ ಸರಿದಂತೆ ಆಕಾಶದೆತ್ತರದ ಕೂಗುಗಳು ಕಡಿಮೆಯಾದವು. ಅಲ್ಲಲ್ಲಿ ಕೊನೆಯ ನರಳಿಕೆಗಳು ಮಾತ್ರ ಕಿವಿ ಮುಟ್ಟುತ್ತಿದ್ದವು. ನಿಧಾನವಾಗಿ ಅವು ಕೂಡ ನಿಂತು ಹೋದವು.

ನಾನು ಭದ್ರವೆಂಬ ಭಾವ ನನಗಿತ್ತು. ಅಷ್ಟರಲ್ಲಿ ಕಾಣಿಸಿಕೊಂಡವನು ಅದೇ ಕಿರೀಟ, ನೀಲಿ ನಿಲುವಂಗಿ ತೊಟ್ಟವನು. ಅರೆ! ಅವನಿಗೆ ಕಿರೀಟವಿದ್ದಲ್ಲೀಗ ಕೋಡು ಕಾಣಿಸುತ್ತಿದೆ!! ಖಂಡಿತವಾಗಿ ಆತ ಬರುತ್ತಿರುವುದು ನನ್ನನ್ನೇ ಇರಿಯಲು ಎಂದು ಥರಗುಟ್ಟಿದೆ. ನಿಂತ ಜಾಗದಿಂದ ಒಂದೇ ಉಸುರಿಗೆ ಬದುಕಿದರೆ ಬದುಕಲಿ ಎಂದುಕೊಂಡು ಕಣ್ಮುಚ್ಚಿ ಅಲ್ಲಿಂದ ಹಾರಿದವನು ಹೋಗಿ ಬಿದ್ದಿದ್ದು ಕೊಟ್ಟಿಗೆಗೆ! ಆದರೆ ಅಲ್ಲಿ ಎಮ್ಮೆ ಕೋಣಗಳಿರಲಿಲ್ಲ. ಬಿಳಿ ಬಣ್ಣದಲ್ಲಿ ಮಿಂದೆದ್ದು ಬಂದಂತಿದ್ದ ಸಾವಿರಾರು ಹಸುಗಳು!! ಅವುಗಳೆಲ್ಲದರ ಬಣ್ಣವೂ ಬಿಳಿಯೇ!!! ಬಿದ್ದಲ್ಲೇ ಮಲಗಿದೆ. ಅಲ್ಲೇ ನಿದ್ದೆ ಹತ್ತಿತು.

ಮರುದಿನ ಶಾಲೆಗೆ ಹೊರಟಿದ್ದೆ. ಇವತ್ತು ಮಳೆಯಿರಲಿಲ್ಲ, ಹಿಮ ಸುರಿಯುತ್ತಿತ್ತು. ದಾರಿಯಲ್ಲೊಂದು ಭೀಮಾಕಾರದ ಲಾರಿ, ಎದುರಿಗೆ ನವ ಜೋಡಿಯಿರುವ ಕಾರನ್ನು ಅಟ್ಟಿಸಿ ನಡೆದಂತಿತ್ತು. ಒಂದರೆಕ್ಷಣ ತಬ್ಬಿಬ್ಬಾದೆ. ಆತ ಅವನೇ? ಹೌದು. ಹೌದು ಅದು ಆತನೇ! ಲಾರಿಯನ್ನು ಓಡಿಸುತ್ತಿದ್ದವ ಕಿರೀಟ, ನೀಲಿ ನಿಲುವಂಗಿ ತೊಟ್ಟಿದ್ದ!! ತಕ್ಷಣ ಕಾರಿನಲ್ಲಿದ್ದವರಿಗೆ ಕೇಳಿಸಲಿ ಎಂದುಕೊಂಡು ಹೋ ಎಂದು ಅರಚಿದೆ. ಅಮ್ಮ ಬಂದು ಶಾಲೆಗೆ ಹೊತ್ತಾಯಿತು, ಹೋಗಲ್ವಾ? ಎಂದು ಗದರಿದಳು !!!

(ಕನಸುಗಳಿಗೆ ಬುಡವಿಲ್ಲ, ತುದಿಯಿಲ್ಲ, ಅರ್ಥ ಸಂಭಂಧವಿಲ್ಲ ಅಥವಾ ಎಲ್ಲವೂ ಇವೆ. ಬಿದ್ದ ಕನಸುಗಳಲ್ಲಿ ಬಹಳಷ್ಟು ಮರೆತು ಹೋಗುವುದೂ ನಿಜ. ಹೀಗೆ ಇತ್ತೀಚೆಗೆ ನನಗೆ ಬಿದ್ದ ಕನಸನ್ನು ಯಥಾವತ್ತಾಗಿ ಬ್ಲಾಗಿಗೆ ತುರುಕುತ್ತಿದ್ದೇನೆ, ಹಾಗೇ ಓದಿಕೊಳ್ಳಿ) ಲೇಖನದ ಕಟ್ಟ ಕೊನೆಯ ಸಾಲನ್ನು ಹೊರತುಪಡಿಸಿ ಉಳಿದವೆಲ್ಲಾ ಸತ್ಯ(?)