Archive for ಸೆಪ್ಟೆಂಬರ್, 2011

ಹಳೆ ಮುದುಕಿಯ ಹಕೀಕತ್ತು…!

 

 

 

 

 

 

ನಿನ್ನೆ ದಿನ ಅಜ್ಜಿ ಕೊಟ್ಟ ಮಾತಪೆಟ್ಟಿಗೆ
ಎರಡು ಓಲೆಗಳು ಬೆಚ್ಚಗಾಗಿವೆ
ವಿರುದ್ಧ ದಿಕ್ಕಿಗೊಡುವ ಫೆವಿಕಾಲ್ ಆನೆಗಳು
ಅಂಟಿನ ಮೇಲೆ ನಂಟು ಕಳಕೊಂಡಿವೆ

ತೋರಣ, ಹೊಗೆ ಅಂಡೆ
ರಂಗೋಲಿ, ಪ್ರಧಾನ್ ಬಾಗ್ಲು ಎಲ್ಲವೂ
ಕಾಣದ
ಎದುರಾಳಿ ಪಟ್ಟನ್ನು ಯೋಚಿಸುತ್ತಿವೆ
ಬೋನಲ್ಲಿದ್ದ ಟೈಗರ್ ಕೂಗಿ ಸುಮ್ಮನಾಗಿದೆ

ತುಳಸಿ ಮದುವೆಗೆ ಹಚ್ಚಿದ ಬಣ್ಣ
ಕಟ್ಟೆಯ ಮೇಲೆ ಫಳ ಫಳಿ ಸುತ್ತಿದೆ
ಆಚೆ ಅಂಗಳಕ್ಕೋ, ಈಚೆಗೋ ತಿಳಿಯದೆ
ಗಿಡ ಹೊಯ್ದಾಡುತ್ತಿದೆ,
ಹುಯಿಲೆಬ್ಬಿಸದ ಗಾಳಿ ಅತ್ತಿಂದಿತ್ತ ತೆವಳುತ್ತ
ಕೊನೆಯ ಬಾರಿಗೆಂಬಂತೆ
ನೇವರಿಸುತ್ತಿದೆ

ಒಳ ಕೋಣೆಯ ಬೀರು
ತನ್ನೊಳಗಿನ ಬಣ್ಣದ ಲೋಹಗಳನ್ನು
ಮತ್ತೆ ಮತ್ತೆ ಕಣ್ದುಂಬಿಕೊಳ್ಳುತ್ತಿದೆ
ಹೊಸ ಜಾಗ ಸೇರುವ ಖುಷಿ,
ಯಾಕೋ ಯಾವುದಕ್ಕೂ ಇಲ್ಲ
ಯಾರಿಗೆ ಸೇರಬಹುದು ಮಾಳಿಗೆಯ ಬೆಲ್ಲ?!

ಅಜ್ಜ ನೆಟ್ಟ ಚಂದ್ರ ಪೇರಲೆ
ತೋಟದಂಚಿನ ಸಿಹಿ ನೇರಳೆ
ಅಗಲದ ಚುಕ್ಕಿ ದಾಸವಾಳ
ಕೊಯ್ದಷ್ಟೂ ಬಿಡುವ ಚಪ್ಪರದ ತೊಂಡೆ
ಎಲ್ಲವೂ ಪಾಲಾಗುವುದರಲ್ಲಿವೆ
ಮನಸ್ಸುಗಳ ಕೆಲಸ ಈಗಾಗಲೇ ಮುಗಿದಿದೆ

ಜಗಲಿ ಮೇಲೆ ಜೋಡಿಸಿದ್ದ
ರವಿವರ್ಮನ ದೀಪಸುಂದರಿಗೆ
ಮಬ್ಬು ಹಿಡಿದಿದೆ
ಗಂಧದ ಕಲ್ಲಿಗೆ ಒಡೆ ಬಂದಿದೆ
ಗಿಳಿಗೂಟದ ಕಥೆ ಕೇಳುವವರ್ಯಾರು?
ಅವೂ ಭಾವಗಳಂತೆ…

ಅಟ್ಟದ ಮೇಲಿನ ಮೂರನೆತ್ತೆಯ
ನನ್ನ ಟಯರ್
ಮುನಿಸಿ ಕೂತಂತಿದೆ
ಅರಿಶಿನದ ಬಟ್ಟಲಲ್ಲಿ
ಕುಂಕುಮ ಖಾಲಿಯಾಗಿದೆ
ನಡುಮನೆಯೂ
ಇಲ್ಲವಾಗುವುದರಲ್ಲಿದೆ

ಹೊಸ ಹಾಸಿಗೆ, ಅಡ್ಡಾದಿಡ್ಡಿ ಗೋಡೆಗಳು
ಇನ್ನೊಂದು ದೋಸೆ ಬಂಡಿ,
ಎರಡೆರಡು ಗುದ್ದಲಿ, ಪಿಕಾಸು, ಹಾರೆಗಳು
ಗೆರೆಕೊರೆದ ಗದ್ದೆ ತೋಟಗಳು
ಆತ್ಮವಿಲ್ಲದ ಪ್ರತಿಮೆಗಳು
ನಿಜಕ್ಕೂ
ಸಂಕಟ ಹುಟ್ಟಿಸುತ್ತವೆ

ಎಲ್ಲವೂ ಬದಲಾದೀತು
ಹೇಳಿ ಕೇಳಿ ಅಜ್ಜಿಯ ಮಾತು…!

ಹಲವು ಬರಿದಾಗುತ್ತ
ಮತ್ತೆ ಕೆಲವು ಬಲಿಯಾಗುತ್ತ
ಇತರೇ ಸಂಗತಿಗಳು ಚಿಗುರೊಡೆಯುತ್ತ
ಗಂಟಲ ನರ ನಡುಗುತ್ತದೆ
ಸೋಣೆ ಗಿಡ ತುಂಬಿಕೊಳ್ಳುತ್ತದೆ

ಮತ್ತೆ….

ತೊಟ್ಟಿಲು ನಗುತ್ತದೆ

ನಾಮವೊಂದೇ.. ಭಾವ ಹಲವು….!

ಅಬನೀಂದ್ರನಾಥ್ ಟ್ಯಾಗೋರ್ (7 ಆಗಸ್ಟ್ 1871 – 5 ಡಿಸೆಂಬರ್ 1951) ರ ಒಂದು ಚಿತ್ರ ಗಮನ ಸೆಳೆಯಿತು. “ಪ್ರಯಾಣದ ಕೊನೆ” ಎಂಬರ್ಥದ ಕಲಾಕೃತಿ ಇದು. ಇದೆ ಅರ್ಥ ಬರುವ ಕೆಲವು ಪಾಶ್ಚಾತ್ಯರ ಚಿತ್ರಗಳನ್ನೂ ‘ಕಲೆ’ ಹಾಕಿದೆ. ಪರಿಣಾಮ ಕೆಳಗಿದೆ. ಅನುಭವ ನಿಮಗಿದೆ..!


ಮೇಲಿನದು ಅಬನೀಂದ್ರರ ಕಲಾಕೃತಿ. ನವ ದೆಹಲಿಯ ಆಧುನಿಕ ಕಲಾ ಸಂಗ್ರಹಾಲಯದಲ್ಲಿದೆ.

 

ಮೇಲಿನದು ವರ್ಜೀನಿಯಾದ ಕಲಾವಿದೆ ‘ನೋರ್ಮಾ ವಿಲ್ಸನ್’ ರ ‘ಪ್ರಯಾಣದ ಕೊನೆ’

ಮೇಲಿರುವ ಕಲಾಕೃತಿ ಫ್ಲೋರಿಡಾದ ‘ಜಾಕ್ಸನ್ ವಿಲ್ಲೆ’ ಮೂಲದ ‘ಡೆನ್ನಿಸ್ ಟಾವಾಸ್’ (1954) ರದ್ದು.

ಮೇಲಿನದು ಜ್ಹೆಕೋಸ್ಲಾವಾಕಿಯ ಮೂಲದ ‘ಆಂಡ್ರ್ಯೂವಾಲ್ಕೋ’ ಎಂಬಾತನ Journey’s End ಚಿತ್ರ.


ಅಮೆರಿಕಾದ ‘ಡೇವಿಡ್ ಜೆ ಫೆಡೆಲಿ’ (1959) ಬಿಡಿಸಿದ ಚಿತ್ರ ಮೇಲ್ಕಂಡಂತಿದೆ.

(ಈ ಪೋಸ್ಟ್ ಕಳೆದ ಒಂದು ತಿಂಗಳಿನಿಂದಲೂ ನನ್ನ ಬ್ಲಾಗ್ ಬುಟ್ಟಿಯಲ್ಲೇ ಕೊಳೆಯುತ್ತಿತ್ತು. ಇದನ್ನು ಬ್ಲಾಗ್ ಗೆ ಹಾಕಲೋ ಬೇಡವೋ ಎಂಬ ವಿಚಿತ್ರ ಮನಸ್ಥಿತಿ ನನಗಿತ್ತು. ಕಾರಣ ಮತ್ತೇನಿಲ್ಲ, ವರ್ಡ್ ಪ್ರೆಸ್ ನವರು ಕೊಟ್ಟ ಪುಕ್ಕಟೆ ಜಾಗವನ್ನು ಅನರ್ಥಕವಾಗಿ (ಅನರ್ಥಕ ಎಂದರೆ ತಪ್ಪಾದೀತು. ಕಲೆ ಹೇಗೂ ಇರಲಿ, ಯಾವ ಪರಿಣಾಮವನ್ನೇ ಬೀರಲಿ, ಅದು ಒಂದಿಲ್ಲೊಂದು ವಿಚಾರದ ಸಾಕ್ಷಿಯಂತೂ ಹೌದಲ್ಲ..) ತುಂಬಿಸುತ್ತಿರುವೆನೇನೋ ಎಂಬ ಬಡಿವಾರವಷ್ಟೇ. ಆದರೆ ನನಗೆ ಮೂಡಿದ ಆಸಕ್ತಿ, ಕಂಡ ಮಿಂಚುಗಳು ಮತ್ತಷ್ಟು ಜನರಲ್ಲಿ, ಪುಟ್ಟ ಕಂಪನಗಳನ್ನಾದರೂ ಎಬ್ಬಿಸಬಹುದೇನೋ ಅನ್ನಿಸಿತು. ಹಾಗಾದ ಪಕ್ಷದಲ್ಲಿ ಒಂದೆರಡು ಸಾಲುಗಳು ನನಗಿರಲಿ.)