Feeds:
Posts
Comments

ಇತ್ತ ಚಿತ್ತ ಹಾಯಿಸಿ…

ಗಿಜಿಗುಡುವ ಮಾರ್ಕೇಟ್ ರಸ್ತೆ

ಮೊನ್ನೆಯ ಮಳೆಯಿಂದಾದ ಕೆಸರು ಕುಂಡಗಳು

ಅನಾಥವಾಗಿ ಬಿದ್ದ ಕೊಳೆತ ಕೋಸು

ಉರುಳುರುಳಿ ಬಂದ ನಿಂಬೆ ಹಣ್ಣು

ದೇಖರಿಕೆಯಿಲ್ಲದೇ ನಾರುವ

ಕಾರ್ಪೋರೇಶನ್ ತೊಟ್ಟಿ

ಪ್ಲಾಸ್ಟಿಕ್ ಧೂಮಕ್ಕೆ ತಲೆಯಾನಿಸುವ ಮತ್ತರು

ಚಿಂತೆಯೇಕೋ ಗೆಳೆಯಾ..? ಎಂಬ ಸಮಾಧಾನಗಳು

ರಪ್ಪಡಕ ಕೆಂಪು ಮೆತ್ತಿದ ಸ್ತಂಭ

ತೂತು ಬಿದ್ದ ನಾಲ್ಕಾರು ಪತಾಕೆಗಳು

ಬುಡದಲ್ಲಿ ಒಣಗಿದ ಮೈಸೂರ ಮಲ್ಲಿಗೆಯ ಹಾರ

ಅಲ್ಲಲ್ಲೇ ಕಕ್ಕಕ್ಕೆ ಕುಳಿತ ಸಿಂಬಳ ಸುರುಕ ಕೂಸುಗಳು

ಅವರ ಚೊಣ್ಣದಲ್ಲಿ ಬಣ್ಣಗಳ ದಿಬ್ಬಣ

ಮರೆಮಾಚಲು ಸಮರ್ಥವಾದ ಸೆರಗಿಲ್ಲದೇ

ಉಬ್ಬಿ ಕಾಣುವ ಕಡು ಕಪ್ಪು ಚೆಲುವೆಯ ಸ್ತನ

ರೆಪ್ಪೆಯಾಡಿಸದೇ ದೃಷ್ಟಿ ನೆಟ್ಟ ಪುಂಡರು

ನಿನ್ನದೆನ್ನಲು ತನುವೂ ಇಲ್ಲ, ಮನವೂ ಇಲ್ಲ

ಕಂಗಳಲ್ಲಿನ ಕನಸುಗಳೆಲ್ಲಾ ಸತ್ತು ತೇಲುತ್ತಿವೆ!

ದೂರದಲ್ಲೆಲ್ಲೋ ಚುನಾವಣಾ ಭಾಷಣ

ಮೇರಾ ಭಾರತ್ ಮಹಾನ್…

ಮೈಕ್ ಒದರುತ್ತಿದೆ ಬದಿಯಲ್ಲಿ…………

ಟುರುಗುಟ್ಟುವ ಜಾತ್ರೆಯ ಉದ್ದನೆಯ ಪಿಸ್ತೂಲುಗಳು!

ಒಂದೇ ಮೊಳೆಯಲ್ಲಿ ತೂಗುವ, ಮುರಿದ ಫ್ರೇಮಿನ

ಒಡೆದ ಗಾಜಿನ, ಫೋಟೋದಡಿ ನಸು ನಗುವ ಗಾಂಧಿ

ಇತ್ತ ಚಿತ್ತ ಹಾಯಿಸಿ,

ಪಟ್ಟ ತೊಟ್ಟವರೇ…

ಹೇವರವ ಹೈರಾಣಾಗಿಸಿ

ಕೃಪೆ ತೋರಿರಿ…

ಪ್ರೀತಿ ಕಡಲೋ, ಮುಗಿಲೋ, ಮಳೆಯೋ ಮತ್ತಿನ್ನೇನೋ? ನನಗೊಂದೂ ಗೊತ್ತಿಲ್ಲ. ಆದರೆ ಈ ಪರಿಯ ಹೋಲಿಕೆ ಪ್ರೀತಿಯ ಅರ್ಥವನ್ನು ಸೀಮಿತಗೊಳಿಸಬಹ್ಮದೆಂಬ ಭಯ ನನಗೆ ಕಾಡಿದ್ದಿದೆ. ಪ್ರೀತಿಯ ಕುರಿತಾಗಿ ಪ್ಮಟಗಟ್ಟಲೇ, ಗಂಟೆಗಟ್ಟಲೇ ಭಯಂಕರವಾಗಿ ಕೊರೆಯುವವರು, ಕನವರಿಸುವವರ ಎದುರು ನಿಂತು ನಿಜಕ್ಕೂ ಪ್ರೀತಿಯೆಂದರೆ ಅಷ್ಟೇನಾ ಕೇಳಬೇಕೆನಿಸುತ್ತದೆ, ಸುಮ್ಮನಾಗುತ್ತನೆ!

ಸತ್ಯವಾಗಿ ಹೇಳುತ್ತೇನೆ, ನೀನಂದು ನನ್ನ ಮರೆತೆಯೆಂದು ತಿಳಿದ ಕ್ಷಣ ನಾನು ಭೋರ್ಗರೆವ ನದಿಯಾಗಲಿಲ್ಲ. ಜಿಟಿ ಜಿಟಿ ಸುರಿಯುವ ಮಳೆಯಾಗಲಿಲ್ಲ. ತಣ್ಣಗಿರುವ ಧರಣಿಯ ಸ್ಥಿತಿಗೆ ಹೋಲಿಸಬಹುದಿತ್ತಷ್ಟೇ. ನೀನು ಕೋಪಿಸಿಕೊಂಡರೂ ಇನ್ನು ಚಿಂತಿಲ್ಲ! ನಾನು ಹೇಳಬೇಕೆನಿಸಿದ್ದನ್ನೆಲ್ಲಾ ಹೇಳುವವನೇ… ನಿನ್ನೊಡನಿದ್ದಾಗ ನಾನು ಕೆಲವು ಕನಸುಗಳ ಕಟ್ಟಿದ್ದೆ, ಈಗಿಲ್ಲವೇ ಎಂದು ವ್ಯಂಗ್ಯವಾಡುವ ಅವಕಾಶ ನಿನಗಿಲ್ಲ. ಯಾಕೆಂದರೆ ಅಂದು ಕೆಲವಿದ್ದ ಕನಸುಗಳೀಗ ಹಲವಾಗಿವೆ!

ನಾನು ನಿನ್ನನ್ಮಡಿಗೆ, ನಡೆಗೆ, ಚೆಲುವಿಗಿಂತ ಹೆಚ್ಚಾಗಿ ಮನಸೋತದ್ದು ಆ ದಪ್ಪನೆಯ ಪುಸ್ತಕದಲ್ಲಿ ನೀನು ಜತನದಿಂದ ಎತ್ತಿಟ್ಟುಕೊಂಡು, ಮರಿ ಹಾಕುತ್ತದೆಂದು ಕಾಯ್ದಿದ್ದ ನವಿಲುಗರಿಗೆ! ಆ ಕಾಯುವಿಕೆಯಲ್ಲಿನ ಗಾಢತೆಗೆ. ಅದು ಮರಿ ಹಾಕಿತೋ ಇಲ್ಲವೋ ಕಾಣೆ, ಆದರೆ ನಿನ್ನ ಆ ಕಾಳಜಿ ನನ್ನಲ್ಲಿ ಸ್ಪಷ್ಟ ಮೊಹರೊತ್ತಿತ್ತು. ನಕ್ಷತ್ರಗಳನ್ನು ಎಣಿಸಿ, ಗುಣಿಸಿ ಸೋತ, ಆಕಾಶದ ಹರವು ಕಂಡು ಆಸೆಪಟ್ಟ, ಅಗಾಧ ಸಾಗರದ ನಡುವೆ ಕುಳಿತು ಹಾಯಿದೋಣಿಗಾಗಿ ಹಂಬಲಿಸುತ್ತಿದ್ದ ನನಗೆ ನೀನು, ಚಿಗುರುವ ಕನಸಿನ ಸನಿಹದ ಆಸರೆಯ ಮರವಾಗಿ ಕಂಡೆ ಅಷ್ಟೆ.

ಮಳೆ ಹೊಯ್ದು ಹದವಾದ ನೆಲದಲ್ಲಿ ಚಿಗುರು ಕೊನರಿ ಗಿಡವಾಯ್ತು, ಬಳ್ಳಿಯಾಯ್ತು ಮತ್ತು ಹಬ್ಬಿತು. ಆಸರೆಗೆ ಮರವಿದೆಯೆಂಬ ವಿಶ್ವಾಸ ಅದಕ್ಕಿತ್ತು. ನಿಜಕ್ಕೂ ನನಗಿವತ್ತು ಪಚ್ಚೆನಿಸುತ್ತಿದೆ. ಹಾದಿ ಸಿಕ್ಕಿದ ನಾನು ಕೊನೆಯ ಕುರಿತು ಯೋಚಿಸುವುದನ್ನು ಮರೆತು ಬಿಟ್ಟೆನಲ್ಲಾ ಎಂದು. ಹೋಗಲಿ ಬಿಡು, ನನಗಾಗ ಹತ್ತರೊಡನೆ ಹನ್ನೊಂದಾಗಬಾರದೆಂಬ ಮೊಂಡ ತನವೂ ಇತ್ತು. ಈಗಲೂ ಇದೆ. ಆದರೆ ಅದರ ತೀವ್ರತೆಗೆ ರೂಪು ರೇಖೆಗಳನ್ನೆಳೆದಿದ್ದೇನೆ. ನಿನಪಿಡು, ರೇಖೆಗಳೆಲ್ಲಾ ಚೌಕಟ್ಟಾಗಬೇಕೆಂದಿಲ್ಲ. ಚೌಕಟ್ಟು ಅಥವಾ ಮೇರೆಯೆಂಬುದು ವ್ಯಕ್ತಿಯ ಚಲನೆಯನ್ನು ನಿಯಂತ್ರಿಸಿ ಆತನ ವಿಪರಿಮೀತ ಬೆಳವಣಿಗೆಗೆ ತಡೆಯೊಡ್ಡುತ್ತದೆಂಬ ಅಚಲ ವಿಶ್ವಾಸ ನನಗೆ. ನಿಯಂತ್ರಿಸುವಿಕೆ, ಸ್ವಾತಂತ್ರ್ಯವಿಲ್ಲದ ಸ್ಥಿತಿಯ ಇನ್ನೊಂದು ರೂಪು. ಅದು ಬಂಧನ. ಬಂಧನವಿದ್ದಲ್ಲಿ ಬೆಳವಣಿಗೆ ಪೂರ್ವಾಗ್ರಹ ಪೀಡಿತ ತಾನೇ? ನೀನು ಒಪ್ಪಲೇ ಬೇಕು.

ನಾನು ಕವನ ಬರೀತಿದ್ದೆ ನೆನಪಿದೆಯಾ? ಅದೇನ್ ಬರೀತೀಯೋ ಮಾರಾಯಾ? ನಂಗಂತೂ ತಲೆಬುಡ ಅರಿಯೊಲ್ಲ ಅಂದಿದ್ದೆ ನೀನು. ನಾನು ನಕ್ಕಿದ್ದೆ! ಇವತ್ತು ಹೇಳುತ್ತೇನೆ. ನನ್ನೊಳಗಿನ ನಾನು ಹೊರಬಂದು ಮಲಗಿದರೆ ಕವನವಾಗುತ್ತಿತ್ತು. ನನ್ನೊಳಗಿನ ನಾನೇ ಸ್ಪಷ್ಟವಾಗಿಲ್ಲದಿದ್ದ ಕಾರಣ ಬರವಣಿಗೆಯೂ ಅಸ್ಪಷ್ಟವೆನಿಸುತ್ತಿತ್ತು. ಆದ್ದರಿಂದಲೇ ನನ್ನ ಬರಹಗಳು ಹಾಗೇ ಒಂಥರಾ ನಿನ್ನ ಹಾಗೆ!

ನೀನು ಬಾಲ್ಯದ ಹುಡುಗಾಟಗಳನ್ನೆಲ್ಲಾ ದಾಟಿ, ತಾರುಣ್ಯದ ಬಿಸುಪು, ಪ್ರಬುದ್ಧತೆ, ಮತ್ತೊಂದಿಷ್ಟು ಅನುಭವಗಳ ಬತ್ತಳಿಕೆ ಹೊತ್ತಿದ್ದೆ. ಹೊಸ ಹಾದಿಗಳ ಹುಡುಕಿ ಸವೆಸುವ ಪ್ರಯೋಗಶೀಲ ಮನಸ್ಸೂ ನಿಂದಾಗಿತ್ತು. ಪ್ರತಿ ಮುಂಜಾವು ಮೂಡುವ ರವಿ ನಿನ್ನಲ್ಲಿ ಹೊಸ ಕನಸುಗಳ ಅರಳಿಸುತ್ತಿದ್ದ. ಅದನ್ನು ಕಾವಲು ಕಾಯಲು ನಾನಿದ್ದೆನೆಂಬ ಧೈರ್ಯ ನಿನಗೆ ಹುಟ್ಟಲಿಲ್ಲ ಅಷ್ಟೆ. ಅಥವಾ ಇವೆಲ್ಲಕ್ಕೂ ಮಿಗಿಲಾದ ಮತ್ತಿನ್ನೇನೋ ನಿನಗೆ ಬೇಕೆನಿಸಿತು ಇಲ್ಲವೇ ಇವೆಲ್ಲಾ ಸಾಕೆನಿಸಿತು. ನಾನು ಪ್ರತಿಯಾಡುವುದಿಲ್ಲ ಗೆಳತಿ ಅದಕ್ಕೆ. ನನಗೆ ಗೊತ್ತು ಬದುಕು ಬದುಕುವವರಿಚ್ಛೆ! ಬದಲಾಯಿಸುವುದು ಕಷ್ಟ ಸಾಧ್ಯ, ಊಹುಂ ಬದಲಾಯಿಸಲು ಬಾರದು. ಮಾದರಿಯಾಗಬಹುದಷ್ಟೇ.

ಮರಕ್ಕೆ ಬಂದಳಿಕೆ ಬಂದಂಟಿದ ಸನ್ನಿವೇಶ ನನಗೆ ನೆನಪಿಲ್ಲ ಇವತ್ತು. ನಿನಗೆ ಧಾರಿಣಿಯೊಡನೆಗಿನ ಸಂಬಂಧ ಮತ್ತಷ್ಟು ಆಪ್ತಬಾಗಬೇಕೆಂದು ಅನ್ನಿಸಿರಲಿಕ್ಕೂ ಸಾಕು ಅವತ್ತು. ಕಾರಣಗಳಿಗಿಂತ ಸಾಧನೆ, ಪರಿಣಾಮ ಮುಖ್ಯವಲ್ಲವೇ? ಬಿಡು…

ಅವತ್ತು ಅಮ್ಮನೊಡನೆ ಅಮ್ಮಾ ನಂಗಿವತ್ತು ನಿನ್ನ ಮಡಿಲು ಬೇಕಿಲ್ಲ, ಒಬ್ಬನೇ ಮಲಗಿ ಕಾದು ನಿಂತ ಕನಸುಗಳಿಗೆ ಸ್ವಾಗತ ಕೋರುತ್ತೇನೆ ಎಂದಾಗಲೇ ಮೋಡ ಕಟ್ಟಿತ್ತು. ಜೋರು ಮಳೆ ಶುರುವಾಗಿದ್ದು ಅಂದುಕೊಂಡಿದ್ದಕ್ಕಿಂತ ಬೇಗ. ಗಾಳಿಯ ಅರ್ಭಟವೂ ಜೋರಿತ್ತು. ಮರ ಮುರಿದು ಬಿತ್ತು. ಅನಾಥವಾಗಲಿಲ್ಲ! ಬದಲಾಗಿ ಇನ್ನೊಂದು ಮರದ ಅರಸುವಿಕೆಗೆ ತೊಡಗಿತು. ನನಗೆ ಎಚ್ಚರವಾಯ್ತು.

ಬಹುಶಃ ಭವಿಷ್ಯದ ಕನಸನ್ನೂ ಹೇಳುವುದು ಪ್ರಸ್ತುತವೆನಿಸುತ್ತಿದೆ. ಇವನ್ನೆಲ್ಲವನ್ನೂ ನೀನು ಓದಲೇ ಬೇಕೆಂಬ ಕಟ್ಟುನಿಟ್ಟು ನಾ ಹಾಕೊಲ್ಲ. ಈ ಬರಹದ ಮೂಲಕ, ನೀನು ನನ್ನೆಲ್ಲಾ ಭಾವನೆಗಳನ್ನು ಗುಡಿಸಿ ಹಾಕಿದೆ ಎಂಬ ಆರೋಪ ಮಾಡುವ ಮನಸ್ಸೂ ನನ್ನದಲ್ಲ. ನನ್ನೊಬ್ಬಳು ಗೆಳತಿ ಹೇಳಿದ್ದಳು ಭಾವುಕತೆಯಿಂದ ಬುದ್ಧಿ ಕುಂಠಿತವಂತೆ. ನಾನಿಷ್ಟು ಹೊತ್ತು ಹೊತ್ತುಕೊಂಡಿದ್ದು ಅದನ್ನೇ. ಭಾವೋತ್ಕರ್ಷವೇ ಇಷ್ಟೆಲ್ಲಾ ಸಾಲುಗಳ ಜನುಮಕ್ಕೆ ಕಾರಣ. ನಾನು ಭಾವನಾ ಜೀವಿ ನಿಜ. ಇವತ್ತಿಗೂ ನನ್ನ ಕಂಪ್ಯೂಟರ್, ಐ ಪಾಡ್ ಗಳಲ್ಲಿ ತುಂಬಿರುವುದು ಅಪ್ಪಟ ಭಾವಗೀತೆ, ಶಾಸ್ತ್ರೀಯಗಳೇ. ಉನ್ನಿಕೃಷ್ಣನ್ ನಂಗೆ ಯಾವತ್ತೂ ಇಷ್ಟ ಅಂತ ನಿಂಗೂ ಗೊತ್ತು. ನಾನು ಆತನ ಅನಿಲ ತರಲ ಹಾಡನ್ನು ಮತ್ತೆ ಮತ್ತೆ ಕೇಳ್ತಿದ್ದಾಗ ನೀನು ಉರಿಬಿದ್ದಿದ್ದು, ಟೇಸ್ಟೇ ಇಲ್ಲ ನಿಂಗೆ ಅಂತ ಜರಿದಿದ್ದು ಎಲ್ಲಾ ನೆನಪಿದೆ ನಂಗೆ. ಆದರೂ ನಾನವತ್ತು ನೊಂದುಕೊಂಡಿರಲಿಲ್ಲ. ನಾನು ಬೇಸರಿಸಿಕೊಂಡರೆ ನೀನು ಪರಿತಾಪ ಪಡುವೆಯೆಂಬ ಗುಮನಿಯಿತ್ತು ನಂಗೆ.

ಇವತ್ತು ನಾನು ಖುಷಿಯಿಂದ ಹೇಳುವುದಿಷ್ಟೇ. ನನ್ನನ್ನು ತೊರೆದು ಹೋಗಿದ್ದಕ್ಕೆ ನಿನಗೆ ಭರಿಸಲಾರದಷ್ಟು ಥ್ಯಾಂಕ್ಸ್ ! ಅದೇ ನಗೆ ಬದುಕಿನ ಸಾಧ್ಯತೆಗಳನ್ನು, ವಿಕ್ಷಿಪ್ತತೆಗಳನ್ನು ಗಾಢವಾಗಿ ಪರಿಚಯಿಸಿದ್ದು. ನನಗೀಗ ಬಳ್ಳಿಯಾಗಿ ಬದುಕುವ ಹಂಬಲವಿಲ್ಲ. ಮರವಾಗಬೇಕು. ಲೆಕ್ಕ ತಪ್ಪಿಹೋಗುವಷ್ಟು ಬಳ್ಳಿಗಳನ್ನು ಪೊರೆಯಬೇಕು. ಬಳ್ಳಿಗಳೆಲ್ಲಾ ಬಲವಾದ ಮೇಲೊಮ್ಮೆ ಜೋರು ಮಳೆ, ಸಿಡಿಲಿಗೆ ಸಿಕ್ಕಿ ಜರ್ಜರಿತಗೊಂಡು ಬಿದ್ದು, ಭೂಮಿಯ ನಡುವೆ ಕರಗಿ ಕಳೆದು ಹೋಗೇಕು, ಅಷ್ಟೇ… ನನಗೀಗ ಮತ್ತೆ ನಕ್ಷತ್ರಗಳನ್ನು ಎಣಿಸುವಾಸೆ, ಮುಗಿಲು ಮುಟ್ಟುವಾಸೆ, ಶತಮಾನಗಟ್ಟಲೆ ದೋಣಿಗಾಗಿ ಕಾಯಬೇಕೆಂಬ ಬಯಕೆ, ಎಲ್ಲಕ್ಕಿಂತ ಹೆಚ್ಚಾಗಿ ಇವೆಲ್ಲಾ ನನ್ನಿಂದ ಮತ್ತು ನನ್ನೊಬ್ಬನಿಂದಲೇ ಸಾಧ್ಯವೆಂಬ ಅಚಲ ನಂಬಿಕೆ.

ಮತ್ತೊಮ್ಮೆ ಥ್ಯಾಂಕ್ಸ್, ಎಲ್ಲದಕ್ಕೂ…

ಬೆಕ್ಕುಗಳಿಗೆ ಬಡಿವಾರವಿಲ್ಲ
ಮೆಲ್ಲನೆ ತೊಡೆಗೇರಿಸುತ್ತವೆ ಗಲ್ಲ
ಹೆಂಗಸರೋ ಗಂಡಸರೋ
ಅಥವಾ ಮತ್ತಿನ್ಯಾರೋ
ವಯಸಿನಂತರವೂ ಇಲ್ಲ
ಲಿಂಗ ಬೇಧವೂ ಇಲ್ಲ
ಉಣ್ಣುವ, ಮಲಗುವ
ಮುಂಚಿನ ಹೊರತು ರಿವಾಜೂ ಸಲ್ಲ!
ಮಡಿಲು ಬೆಚ್ಚಗಿದ್ದರೆ ಸರಿ

ಮಡಿಲೇರಿದ ಬೆಕ್ಕು
ಅಂಗಾಲು ಅಗಲಿಸಿ ನೆಕ್ಕು
ನೀಟಾಗಿ ಮಡಿಸಿ ಮಲಗಿ-
ದರೆ ದೃಷ್ಟಿಯಾಗಬೇಕು
ಮರುದಿನ ತಟ್ಟೆಗೆ ಹಾಕಿದ
ಹಾಲನ್ನೂ ಬಿಡೋವಷ್ಟು
ಅಥವಾ ಕುಡಿದು ಬಿಡೋವಷ್ಟು!

ಪಾಪಿ ಬೆಕ್ಕುಗಳು ಪಾಪದ
ಹಕ್ಕಿಗಳನ್ನು ಹೊಟ್ಟೆಗಾಕಿಕೊಳ್ಳುತ್ತವೆ
ಬರೀ ಚಕ್ಕಳದ ಗೂಡಿನ
ಚೆಂದದ ಬಟ್ಟೆತೊಟ್ಟವಾದರೂ
ತಿನ್ನುವ ಚಪಲವೇಕೋ?
ಮೊನ್ನೆ ಚಿಟ್ಟೆಯ ರೆಕ್ಕೆಯ
ಬಣ್ಣದ ರವೆ ನಮ್ಮನೆ ಬೆಕ್ಕಿನ
ಬಲ ಮೀಸೆಗಂಟಿತ್ತು!

ಬೆಕ್ಕು ನಮ್ಮನೆಯದೋ?
ಲಂಡನ್ನಿನ ರಾಣಿಯದೋ?
ಉದ್ದದ ನಿಲುವಂಗಿ ತೊಟ್ಟ
ಮಾಯಾಂಗನೆಯದೋ?
ಬೆಕ್ಕು ಬೆಕ್ಕಲ್ಲದೇ ಮತ್ತೇನಲ್ಲ!!!

                        

ಚಕ್ರ

 ಆಕೆಗೋ ತುಂಬಿದ ಬಸಿರು. ಹೊರಗೆ ಮಳೆರಾಯ ರಚ್ಚೆ ಹಿಡಿದ ಮಗುವಿನಂತೆ ಉಧೋ ಎಂದು ಒಂದೇ ಸಮನೆ ಬಿಡುವು ಕೊಡದೆ ಸುರಿಯುತ್ತಿದ್ದಾನೆ. ಮೂರು ವರ್ಷಕ್ಕೆ ಮುಂಚೆಯೇ ಲಾಟರಿಯಲ್ಲಿ ಬಂದ ಮೋಟಾರು ಕಾರಿನಲ್ಲಿದ್ದ ಹನಿ ಪೆಟ್ರೋಲ್ ಒಮ್ಮೆ ಆಘ್ರಾಣಿಸುವಷ್ಟರಲ್ಲೇ ಇಂಗಿ ಹೋಯಿತು. ಮಾವ ಕೊಟ್ಟ ಬೈಕನಲ್ಲೇ ಹೋಗಿ ವೈದ್ಯರನ್ನು ಕರೆತರೋಣವೆಂದರೆ, ಅದರ ಒಂದು ಚಕ್ರ ಎಂದೋ ಟುಸಾಗಿತ್ತು. ಈ ನಡುವೆ ಮೂಲೆಯಲ್ಲಿ ಸ್ವಂತ ದುಡಿಮೆಯಲ್ಲಿ ಕೊಂಡ ಇಪ್ಪತ್ತ್ನಾಲಕ್ಕಿಂಚಿನ ಗಟ್ಟಿ ಮುಟ್ಟಾದ ಸೈಕಲ್ ನನ್ನನ್ನೇ ನೋಡಿ ಅಣಕಿಸಿದಂತೆ ಭಾಸವಾಯಿತು!
* * *

ಮಗ ನಿರಾಳನಿಗೆ ಈಗ ಭರ್ತಿ ಹನ್ನೆರಡು ವಸಂತಗಳು. ಅವನಿಗೆ ಬೈಕ್ ಹೇಳಿಕೊಡಬೇಕಂತೆ. ಅದಕ್ಕೆ ಮೊದಲು ಸೈಕಲ್ ಕಲಿ ಎಂದು ನಾನು ಹೇಳಿದ್ದು ಅವನ ಕಿವಿಗೆ ಬಿದ್ದಂತಿಲ್ಲ.
* * *           
 ನಿರಾಳನ ಮಡದಿಗೀಗ ಹೆರುವ ಸಂಕಟ. ಮನೆಯಲ್ಲಿದ್ದ ಕಾರು, ಬೈಕ್‌ಗಳು ಕಳೆದೆರಡು ತಿಂಗಳಿಗೆ ಮೊದಲೇ ಮಾಡಿದ್ದ ಸಾಲ ತೀರಿಸಲಾಗದೇ ಹರಾಜಾಗಿ ಹೋದವು. ಮತ್ತದೇ ಸೈಕಲ್ ಮೂಲೆಯಿಂದ ಕಣ್ಣು ಮಿಟುಕಿಸುತ್ತಿತ್ತು. ನಿರಾಳ ಅದನ್ನು ನೋಡಿ ಸುಮ್ಮನೇ ನಿಡುಸುಯ್ದನಷ್ಟೇ….. ಈಗ ಮತ್ತೆ ಅಂತಹುದೇ ಮಳೆ, ಕೊಚ್ಚೆ ರಸ್ತೆ, ಹಳೇ ಸೈಕಲ್. ಆದರೆ ಮೈಚರ್ಮ ನೆರಿಗೆಗಟ್ಟಿರುವ ನಾನು ಸೈಕಲ್ ತುಳಿಯುತ್ತಿರುವೆ!
 * * *  

ಹದಗೆಟ್ಟ ತರಕಾರಿ ಪಲ್ಯದೊಡನೆ
ಸೀದು ಹೋದ ಅನ್ನ
ಬೀಡು ಬಿಡುಸಾಗಿ ಎಸೆದದ್ದು
ಪ್ರತೀ ಕೊಚ್ಚಲೂ ಬರೀ ನಾರು
ಅಜ್ಜಿ ಹೇಳುವ ಕಥೆಗಳಂತೆ!

ಬುರುಡೆ ಉರಿಯುವ ಸದ್ದು
ಚಿಟಿ ಪಿಟಿ ಠೇಂಕರಿಸಿದ್ದು, ಠಪ್‌ಗುಟ್ಟಿದ್ದು
ಭಯದ ಅರ್ಥ ಕವುಚಿಕೊಂಡಿದ್ದಲ್ಲೇ
ಎದೆಯ ಮೇಲೆ ಚಿಮುರು ಕೂದಲುಗಳು
ಮೊಳೆಯಲಾರಂಭಿಸಿದಾಗ,
ಬೆವರ ಹನಿಗಳಲ್ಲಿ ಸಾಲುಗಟ್ಟತೊಡಗಿದಾಗ.
ಬೀಡಾಡಿ ಬಸವ ನೀನು, ಬೈಗುಳಗಳ ಬುಟ್ಟಿ,
ತೀರಾ ಕೊನೆಗೆ ಕಿಂಚಿತ್ ಭಾವನೆಗಳನ್ನೂ
ಆಪೋಶನ ತೆಗೆದು ಕೊಂಡಿದ್ದು.

ಶುಷ್ಕ ನೆಲದೊಳಗೆ ಅವಿತೇ ಇದ್ದೆ ನಾನು
ಗಮ್ಯ ಮಾತ್ರ ಅನಂತದೆತ್ತರಕ್ಕೆ ಯಾನ
ಪ್ರೇಯಸಿಯ ಸೆಟೆದ ಮೊಲೆಗಳಿಗೆ ಸಮಾನ
ಯೌವ್ವನದ ಕಸುವು ತುಂಬಿದ ಉಮೇದಿನಲ್ಲಿ
ಅಂದಾಜಿಗೆ ನಿಲುಕದ್ದು ಆಳೆತ್ತರಗಳು!
ಇನ್ನಾದರೂ ಹೊರಟೀತೆ ಮೆರವಣಿಗೆ;
ಪಲ್ಲಂಗವಿರುವ ಸಾಲು ಪಲ್ಲಕ್ಕಿಗಳೊಡನೆ?

ಇಂದಿಗೂ ಬಡಿದಾಡಲು ಸಿದ್ಧ;
ದೃಢವಾಗಿರಲೂ, ಬಂಡೆಗಲ್ಲಿನಂತೆ
ಆದರೆ ಬೆಳ್ಳಂಬೆಳಗಿನ ಹಸಿರಸಿರು ಚಿಗುರು,
ಬೆಚ್ಚಗೆ ತಬ್ಬಿದ ಮಿನುಗುವ ಇಬ್ಬನಿ,
ಪರಿಸ್ಥಿತಿಯನ್ನೇ ಕೆದಕುವ ಮುದಿ ಕೋಲುಗಳು,
ದಪ್ಪನೆಯ ಉಲ್ಲನ್ ಸ್ವೆಟರ್
ಕಪ್ಪು ಫ್ರೇಮಿನ ಅಗಲ ಕನ್ನಡಕದಡಿ
ಮಂಜುಗಟ್ಟಿದ ಅಣಕಿಸುವ ಕಿರುಗಣ್ಣುಗಳು…

ತೀರಾ ಅಧೀರನೆನಿಸುತ್ತಿದೆ
ಕೋಟ್ಯಂತರ ವರ್ಷಗಳೇ ಮುಗಿದು ಹೋದವಾ?
ನನಸಾಗುವ ನಿಟ್ಟಿನಲ್ಲಿ ಬಡಿದಾಡುತ್ತಿದ್ದ
ಕನಸುಗಳೂ ಕದನ ವಿರಾಮ ಘೋಷಿಸಿಬಿಟ್ಟವಾ?

ನನಗೀಗ ಅಂಜಿಕೆ!
ಬದುಕುವ ಭಯ
ಎದೆಯ ಮೇಲಿನ ಕೂದಲುಗಳು
ಮತ್ತೆ ಮತ್ತೆ ನಗುತ್ತಿವೆ
ಕಪ್ಪು ಕಪ್ಪಾಗೇ…
ಅದಕ್ಕೇ ಹೆದರಿಕೆ!!

ನನಗೆ ಎಂಟೋ ಒಂಭತ್ತೋ, ಅಪ್ಪನ ಕಳ
ಕೊಂಡು ತಿಂಗಳೊಂದೋ ಎರಡೋ
ಸಲಿಗೆತ್ತು ಆತನಲ್ಲಿ
ಸಡಗರ”ತ್ತು ಆತನಿದ್ದಲ್ಲಿ
ಈಗ ಆ ಜಾಗದಲ್ಲಿ
“ಷಾದವೋ ತಿಳಿಯದನೋ”ದೆ ಅನ್ನಿಸುತ್ತಿದೆ

ಗುಲಗಂಜಿಯ ಗುಡ್ಡೆ ಹಾಕು
ಅಪ್ಪ ಹುಡುಕಿ ಬರುತ್ತಾನೆ ಎಂದವ
ಹನ್ನೆರಡರ ಮದ್ಯಾಹ್ನದ
ಭೂರೀ ಭೋಜನದ
ನಂತರ ಪತ್ತೆಗೆ ಸಿಗಲಿಲ್ಲ,
’ಡೆಲ್ಲಿ’ಗೇ ಹೋಗಿರಬೇಕು…!
ಬರುವನೇನೋ ಇಂದು, ನಾಳೆ

ಅಮ್ಮ ಭದ್ರ ಮಾಡಿದ್ದ
ಅಪ್ಪನ ಮಾಸಿದ ಪಂಚೆಗೆ
ಗುಲಗಂಜಿ ತುಂಬಿಸಿ ಬಿಗಿಗೊಳಿಸಿದ್ದೇನೆ
ನಡುರಾತ್ರಿ ದಾಟಿದರೂ
ನಿದ್ದೆ ಹತ್ತುತ್ತಿಲ್ಲವಲ್ಲ ?! ಕಾಯು”ಕೆಗೆ
ಕನಸಲ್ಲೂ ಹಾಜರಿ ಕಡ್ಡಾಯ
ಹ್ಞಾ ! ಈಗ ನಿದ್ರೆ ಬರುತ್ತಿದೆ!!

ಆ ’ಕೆಂಪು’ ಮರಗಳ ನಡುವೆ
ಮೊಲಗಳ ಗುಂಪೇ ಅದು?
ಅಸ್ಪಷ್ಟ ಕಾಡೋ, ಕಣ್ಣೋ? ಓಹ್…!
ಗುಲಗಂಜಿ ತುಂಬಿಸಿಟ್ಟ ಚೀಲಗಳು
ಬಹಳಿವೆ ಎಲ್ಲಾ ಅರೆ ಬೆತ್ತಲು
ನನ್ನ ಗಂಟು…, ಅದೋ ಆ ಮೂಲೆಗಿದೆ
ಬಿಳಿ ಮೊಲದ ಸನಿಹದಲ್ಲಿ, ಅಷ್ಟು ಕೆಂಪಗಾಗಿ…!!

ಒಂದು ಸುಂದರ ಮುಸ್ಸಂಜೆ. ಕೊಂಚ ಸಮಯಕ್ಕೆ ಮುಂಚೆ ತಾನೇ ಹೊತ್ತಿಕೊಂಡ ಜಗಮಗಿಸುವ ವಿದ್ಯುತ್ ದೀಪಗಳು ದೂರದ ಪಟ್ಟಣದಲ್ಲಿ, ಆಗಸದ ತಾರೆಗಳಿಗಿಂತ ತೀವ್ರವಾಗಿ ಕಣ್ಣು ಕೋರೈಸುತ್ತಿವೆ. ಮಿಣ್ಣಗೆ ಮಿನುಗುತ್ತಿರುವ ಪಾರ್ಕಿನ ದೀಪಗಳು ಕಣ್ಣಿಗೆ ರಾಚಿ ಕಿರಿಕಿರಿಯನ್ನುಂಟು ಮಾಡದೇ ಹಿತವಾಗಿದೆ. ಮುಂಜಾನೆ ಹೊಟ್ಟೆಪಾಡಿಗಾಗಿ ದೂರದೆಡೆಗೆ ಸಾಗಿದ ಹಕ್ಕಿಗಳು ತಮ್ಮ ಪರಿವಾರದೊಡನೆ ತಿರುಗಿ ಬರುತ್ತಾ, ಗೂಡಿಗೆ ಸೇರಿ ಮರಿಗಳೀಗೆ ಆಹಾರವುಣ್ಣಿಸುವ ತವಕದಲ್ಲಿ ಕಿಚಿಗುಟ್ಟುತ್ತಿವೆ. ಅಲ್ಲೊಮ್ಮೆ ಇಲ್ಲೊಮ್ಮೆ ಹಿಕ್ಕೆಗಳು ಸುರಿಸುತ್ತಾ !
ಪಕ್ಕದ ರಸ್ತೆ ಪಟ್ಟಣಕ್ಕೇ ಹೋಗುತ್ತಾದರೂ ಅಲ್ಲಿ ವಾಹನಗಳ ಆರ್ಭಟ ಅಷ್ಟೊಂದಿಲ್ಲ. ಆಗೊಮ್ಮೆ ಈಗೊಮ್ಮೆ ಹಾದು ಹೋದ ಸರಕು ವಾಹನಗಳು ಚೆಲ್ಲಿದ ಹೊಗೆಯ ಕಮಟು ವಾಸನೆಯಿನ್ನೂ ಅಡರಿಲ್ಲ. ಆದರೆ ನಿಧಾನವಾಗಿ ಮೂಗಿಗೆ ಒತ್ತುತ್ತಿರುವ ಸೂಜಿ ಮಲ್ಲಿಗೆಯದರದ್ದೋ ಎಂಥದರದ್ದೋ ಸುವಾಸನೆ ಕಮಟು ವಾಸನೆಯನ್ನು ಮೀರಿಸುವಂತಿದೆ. ಅನಂದಲ್ಲೊಂದೆಡೆ ಕಾಣುವ ಸುಂದರ ಗೋಪುರಕ್ಕೆ ಹಿಂಡು ಹಿಂಡು ಮೋಡಗಳು ಬಂದು ಮುತ್ತಿಕ್ಕಿ ಮುಂದೆ ಸಾಗುತ್ತಿವೆ. ಆ ಗೋಪುರ, ಅದರಾಚೆಗಿನ ತಿಳಿನೀಲಿ ಮಿಶ್ರಿತ ಮಸುಗು ಪ್ರದೇಶ ಕಲಾವಿದನೊಬ್ಬ ಕ್ಯಾನ್ವಾಸಿನಲ್ಲಿ ಕುಂಚ ಬಣ್ಣಗಳೊಡನೆ ಆಡಿದ ಆಟದಂತಿದೆ. ಪೃಥ್ವಿಯ ಸಾಂಗತ್ಯವನ್ನು ತ್ಯಜಿಸಿ ಸೂರ್ಯದೇವನಿಗೆ ಅದನ್ನು ಕರುಣಿಸುವ ಉದ್ದೇಶವಿಲ್ಲವೆಂಬಂತೆ ಚಂದ್ರ ಮಹಾಶಯ ನಿಧಾನವಾಗಿ ಭೂತಾಯಿಯಿಂದ ದೂರವಾಗಿ ಆಗಸ ಸೇರುವ ಹುನ್ನಾರದಲ್ಲಿದ್ದಾನೆ. ಸೂರ್ಯ ಮುಳುಗಿ ಸಮಯವಾದರೂ ಆತನ ಕಿರಣಗಳಿಂದೆದ್ದ ಬೆಳಕು ಪೂರ್ತಿಯಾಗಿ ಕಳೆದು ಹೋಗದೇ ಆಕಾಶದಲ್ಲೆಡೆ ರಂಗವಲ್ಲಿಗಳನ್ನು ಚಿತ್ತಾರವಾಗಿ ಚಿತ್ರಿಸಿದೆ. ಅದರಲ್ಲೊಂದು ಮೋಡ, ಬಾಯಿಗೆ ಬೆರಳಿಟ್ಟು ಮಲಗಿದ ಮುಗ್ಧ ಮಗುವನ್ನು ಹೋಲುತ್ತಿದೆ. ಪಕ್ಕದಲ್ಲೇ ಇರುವ ಇನ್ನೊಂದು ಮೇಘ ನಿದ್ದೆಗೆ ಜಾರುವ ಮೊದಲು, ಮಗು ಕುಡಿದು ಬಿಟ್ಟ ಹಾಲಿನ ಬಾಟಲಿಯಂತೆ ತೋರುತ್ತಿದೆ !
ಮೆಲುವಾಗಿ ಬೀಸಿದ ತಂಗಾಳಿ, ವೀಣೆಯ ತಂತಿಯನ್ನು ಮೀಟಿದಂತೆ ಸುಂದರ ನಾದವನ್ನು ಎಬ್ಬಿಸುತ್ತಿದೆ. ಗಾಳಿಯಿಂದ ಮರಗಳು ತುಯ್ಡಾಡಿ ಒಂದಕ್ಕೊಂದು ಉಜ್ಜುತ್ತಾ ಗಾಳಿಯ ಸ್ವರಕ್ಕೆ “ಸಾಥ್’ಕೊಡುತ್ತಿವೆ. ಯಾರೋ ಓದಿ ಬಿಸುಟು ಹೋದ ವೃತ್ತಪತ್ರಿಕೆಯೊಂದು ಗಾಳಿಯೊಂದಿಗೆ ಬೆರೆತು ಆಚೀಚೆ ಸುತ್ತುತ್ತಾ ಮಗದೊಂದು ಸ್ವರವನ್ನು ಎಬ್ಬಿಸುತ್ತಿದೆ. ಪಕ್ಕದಲ್ಲಿರುವ ದೃಢಕಾಯ ಮರದ ಬುಡವನ್ನೇ ಆಧಾರವಾಗಿಸಿಕೊಂಡು ಹಬ್ಬಿದ ರಾತ್ರಿ ರಾಣಿ ಹೂವಿನ ಗಿಡ, ಇಂದು ರಾತ್ರಿಯ ರಂಗಸ್ಥಳಕ್ಕೆ ಕಲಾವಿದರನ್ನು ಸಿದ್ಧಪಡಿಸುತ್ತಿದೆ. ಬಿರಿಯಲು ಸಿದ್ಧವಾಗಿ ನಿಂತ ಹೂಗಳ ಭಾರದಿಂದಾಗಿ ಗಿಡದ ಕೊಂಬೆಗಳು ಸ್ವಲ್ಪ ಬಾಗಿದಂತಿದೆ. ಸಂಜೆಯ ಆಹ್ಲಾದಕರ ವಾತಾವರಣದಲ್ಲಿ ಗಾಳೀ ಸೇವನೆಗೆ ಬಂದ ಸಂತೃಪ್ತ ಜನರು ಈಗಾಗಲೇ ತಿರುಗಿ ನಡೆದಿದ್ದಾರೆ. ಜೀವನದ ತುಂಬೆಲ್ಲಾ ಕಷ್ಟವನ್ನೇ ಕಂಡ, ಕಾಣುತ್ತಿರುವ ಜೀವಗಳು ಇದುವರೆಗೂ ಕುಳಿತು ಭೂತ-ಭವಿಷ್ಯತ್ತನ್ನು ನೆನೆದು ತಿರುಗಿ ಮನೆಗೆ ನಡೆಯುವ ಧಾವಂತದಲ್ಲಿದ್ದಾರೆ. ಅವರಲ್ಲಿ ಕೆಲವರು ತಮ್ಮ ಸಮಸ್ಯೆಗಳಿಗೆ ಪರಿಹಾರ ದೊರಕಿದ ಖುಷಿಯಲ್ಲಿದ್ದರೆ ಹಲವರು ಬರುವಾಗ ಹೊತ್ತು ತಂದ ಒಣಮುಖ, ಮನಸ್ಸೊಡನೆಯೇ ವಾಪಸಾಗುತ್ತಿದ್ದಾರೆ. ಅಲ್ಲೇ ಇರುವ ನಳವೊಂದು ಅದ್ಹೇಗೋ ಸ್ವಲ್ಪ ಮುರಿದು ಅದರಿಂದ ಚಿಮ್ಮುತ್ತಿದ್ದ ನೀರಿನ ಕಾರಂಜಿ ಆ ನಸುಗತ್ತಲಲ್ಲೂ ಸುಂದರ ದೃಶ್ಯಗಳನ್ನು ಸೃಷ್ಟಿಸುತ್ತಿದೆ.
ಇವೆಲ್ಲದರ ನಡುವೆ ಮೂಲೆಯಲ್ಲಿ ಜಗತ್ತಿನ ಪರಿವೇ ಇಲ್ಲದಂತೆ ಬೆನ್ನು ತಾಗಿಸಿ ಕುಳಿತು ಭ್ರಮಾಲೋಕದಲ್ಲಿ ವಿಹರಿಸುತ್ತಿರುವ ಯುವ ಪ್ರೇಮಿಗಳು ದೂರ ದಿಗಂತಕ್ಕೆ ದೃಷ್ಟಿ ನೆಟ್ಟು ಭವಿತವ್ಯದ ಸುಂದರ ಕಲ್ಪನೆಯ ಸೌಧಕ್ಕೆ ಕಲಶ ಕೂರಿಸುತ್ತಿದ್ದಾರೆ. ಯಾರ ಹಂಗೂ ಇಲ್ಲದೇ…ಅವರ ಪಿಸುಮಾತಿಗಿಂತ ಎದೆ ಬಡಿತ ಸ್ಪಷ್ಟವಾಗಿ ಕೇಳಿಸುತ್ತಿದೆ. ಈ ಪ್ರೇಮಿಗಳ ಬಳಿಯಲ್ಲೇ ಕೆಳಗೆ ಕುಳಿತ ಕಪ್ಪು ಬೀದಿ ನಾಯಿಯೊಂದು ಮಧ್ಯಾಹ್ನದಿಂದ ಒಂದೇ ಭಂಗಿಯಲ್ಲಿ ಕುಳಿತ ಪ್ರೇಮಿಗಳ ಕೈನಲ್ಲಿರುವ ಪ್ಲಾಸ್ಟಿಕ್ ಚೀಲದಿಂದ ಹೊಮ್ಮುತ್ತಿರುವ “ಎಣ್ಣೆ ತಿಂಡಿ’ ಯ ಘಮಕ್ಕೆ ಮನಸೋತು ಅದನ್ನು ಎಗರಿಸಿಕೊಂಡು ಹೋಗಲು ಆಷಾಢಭೂತಿತನದಿಂದ ಹೊಂಚು ಹಾಕುತ್ತಿದೆ. ಅದಕ್ಕೂ ಗೊತ್ತಿರಬಹುದು, ಪ್ರೇಮಿಗಳಿಬ್ಬರು ಜತೆಯಾದರೆ ಬಾಹ್ಯಲೋಕ ಅವರ ಪಾಲಿಗೆ ಮುಚ್ಚಿಹೋಗುತ್ತದೆ, ಅಂತರಂಗ ಮಾತನಾಡಿಕೊಳ್ಳುತ್ತದೆ ಎಂದು.
-ಈ ಎಲ್ಲ ಸಂಗತಿಗಳು ನಿತ್ಯನಡೆಯುವುದು ತಿಳಿದಿದ್ದರೂ ದಿನಾ ದಿನಾ ಹೊಸತನ್ನು ಹುಡುಕುವ ನೆಪ ಮುಸ್ಸಂಜೆಯನ್ನು ಬೋರಾಗಿಸಿಲ್ಲ, ಬದಲಾಗಿ ಇನ್ನಷ್ಟು ಮುದಗೊಳಿಸಿದೆ ಎಂದರೆ ತಪ್ಪೆನ್ನುವವರೆಷ್ಟು ಮಂದಿ ?

ಸೂರ್ಯನಿಗೆ ಕಂಪಿಲ್ಲ
ನಮ್ಮನೆ ಟೆರೇಸಿಗಿದೆ
ಬಟ್ಟೆ ತೊಳೆದ ಸೋಪಿನ ಬಿಲ್ಲೆಯದ್ದೋ ?
ಒಣಗಿಸಲಿಟ್ಟಿದ್ದ ಹಪ್ಪಳ, ಸಂಡಿಗೆ ಮಸಾಲೆಗಳದ್ದೋ?
ಅಕ್ಕ ಕೂದಲಿಗೆ ಹಾಕಿದ ಶಾಂಪುವಿನದ್ದೋ?
ಇನ್ನು ಏನೇನೋ?

ಸೂರ್ಯನಂಗಳದ ವಿಸ್ತಾರ
ನಮ್ಮನೆ ಟೆರೇಸಿನ ಅದೆಷ್ಟೋ ಪಾಲು
ಆದರೆ, ಅಲ್ಲಿ ಯಾರೂ ಗಾಳಿಪಟ ಹಾರಿಸುವವರಿಲ್ಲ
ಪಕ್ಕದ್ಮನೆಯಿಂದ ಬಂದು ಅಂತ್ಯಾಕ್ಷರಿಗೆ ಕೂಡಿಕೊಳ್ಳುವವರಿಲ್ಲ

ಸೂರ್ಯ ಎದುರು ಬಂದಾಗ
ನಮ್ಮನೆ ಟೆರೇಸಿಗೆ ನಾಚಿಕೆಯೋ ?
ಅಥವಾ ಚೆಂದ ಕಾಣಿಸುವ ಬಯಕೆಯೋ?
ಯಾಕೆಂದರೆ ಸೂರ್ಯ ಕಂತಿದೊಡನೆ
ಈ ಟೆರೇಸು ಬೆತ್ತಲಾಗುತ್ತದೆ
ಅಮ್ಮ ಒಣಗಿದ ಚಿತ್ತಾರದ ಸೀರೆಗಳನ್ನು ಮಡಚಿಡುತ್ತಾರೆ

ಕೊನೆಗೊಂದು ಮಾತು

ಸೂರ್ಯ ಬೆಳಕ ಹರಡುತ್ತಾನೆ

ನಮ್ಮ ಟೆರೇಸು ಅದನ್ನು ತಡೆಯುತ್ತದೆ

ಗುಡಿಸಲಲ್ಲೇ ಕೂತು
ಈ ಕವನ ಕಟ್ಟುತ್ತಿರುವುದಕ್ಕೆ
ಸೂರ್ಯನ ನೆನಪೇ ಕಾರಣ

« Newer Posts